ಮುಗಳಖೋಡ: ಸಮೀಪದ ಹಂದಿಗುಂದ ಗ್ರಾಮದಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಪ್ರಗತಿ ಹೊಂದಿದಾಗ ಹಾಗೂ ಅವರು ಸಾಧನೆ ಮಾಡಿದಾಗ ಪಡುವ ಖುಷಿಯ ಮುಂದೆ ಯಾವ ಆಸ್ತಿ, ಸಿರಿ, ಸಂಪತ್ತು ಬಯಸದೆ ನಿಸ್ವಾರ್ಥತೆಯಿಂದ ದುಡಿಯುವ ಶಿಕ್ಷಕ ವೃತ್ತಿಯೇ ಶ್ರೇಷ್ಠ ಎಂದು ಮಹಾಲಿಂಗಪುರ ಕೆಎಲ್ಇ ಕಾಲೇಜಿನ ಉಪನ್ಯಾಸಕ ಶಿವಲಿಂಗ ಸಿದ್ದಾಳ ಹೇಳಿದರು.
ಅವರು ಇಲ್ಲಿನ ಶ್ರೀ ಸಿದ್ದೇಶ್ವರ ಸಮುದಾಯ ಭವನದಲ್ಲಿ ಶ್ರೀ ಸಿದ್ದೇಶ್ವರ ಕನ್ನಡ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿಕೆ ಗಾಯಕವಾಡ ತಮ್ಮ 33 ವರ್ಷಗಳ ನಿಸ್ವಾರ್ಥ ಸೇವೆಯಿಂದ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಶಿಕ್ಷಕರು ತಮ್ಮ ಕುಟುಂಬವನ್ನು ಲೆಕ್ಕಿಸದೆ ವಿದ್ಯಾರ್ಥಿಗಳು, ತಾವು ಕಲಿಸುವ ಶಾಲೆಗಾಗಿ ಹಗಲಿರು ದುಡಿದು ಸ್ವಾಭಿಮಾನದಲ್ಲಿ ಬದುಕುವ ಶಿಕ್ಷಕರಿಂದ ಸಮಾಜದಲ್ಲಿ ಸುಶಿಕ್ಷಿತವಾಗಿ ಬೆಳೆಯುವ ವಿದ್ಯಾರ್ಥಿಗಳ ಬಾಳು ಬಂಗಾರವಾಗಲಿ. ಶಿಕ್ಷಕರು ನಿವೃತ್ತಿಯಿಂದ ಎದೆಗುಂದದೆ ಸಮಾಜದಲ್ಲಿ ಮತ್ತೆ ಅರಳಿ ತಮ್ಮ ವಿದ್ಯಾರ್ಥಿಗಳ ಜೊತೆಗೆ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಲಿ ಎಂದು ಹೇಳಿದರು.
ಹಳೆಯ ವಿದ್ಯಾರ್ಥಿಗಳು ಶಿಕ್ಷಕ ಜಿ ಕೆ ಗಾಯಕವಾಡ ಹಾಗೂ ದಂಪತಿಗಳ ಪಾದಪೂಜೆ ನೆರವೇರಿಸಿದರು. ನಂತರ ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳು 1ಲಕ್ಷ ರೂಪಾಯಿ ನೀಡಿ ಸತ್ಕರಿಸಿದರು. ಗ್ರಾಮದ ವಿವಿಧ ಸಂಘ ಸಂಸ್ಥೆಗಳು ಗ್ರಾಮಸ್ಥರು ವಿದ್ಯಾರ್ಥಿಗಳು ಸನ್ಮಾನಗಳ ಸುರಿಮಳೆ ಸುರಿಸಿದರು.
*ವರದಿಗಾರರು : ಹನಮಂತ ಬಿರಾದಾರಪಾಟೀಲ*
