ಧಾರವಾಡ: ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾತೋಶ್ರೀ ಶ್ರೀಮತಿ ಗಂಗಮ್ಮ ಎಸ್. ಬೊಮ್ಮಾಯಿ ಅವರ ಜೀವನ, ಮೌಲ್ಯಗಳು ಮತ್ತು ಆದರ್ಶಗಳನ್ನು ಒಳಗೊಂಡ “ಲೋಕ ವಂದಿತ ಅವ್ವ” ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ತಾಯ್ತನವು ಜಾತಿ, ಧರ್ಮ ಹಾಗೂ ಭಾಷೆಯ ಎಲ್ಲ ಗಡಿಗಳನ್ನು ಮೀರಿದ ಸಾರ್ವತ್ರಿಕ ಮೌಲ್ಯವಾಗಿದ್ದು, ಸಮಾಜದ ನೈತಿಕ ಬಲ ತಾಯಿಯ ಪ್ರೀತಿ, ತ್ಯಾಗ ಮತ್ತು ಸಂಸ್ಕಾರಗಳಲ್ಲಿದೆ ಎಂದು ಹೇಳಿದರು. ತಮ್ಮ ಜೀವನದಲ್ಲಿ ಗಂಗಮ್ಮ ಅವರು ತಾಯಿಯಾಗಿ ಮಾತ್ರವಲ್ಲದೆ ಮಾರ್ಗದರ್ಶಕಿ ಮತ್ತು ಮೌಲ್ಯಗಳ ಪ್ರತೀಕವಾಗಿದ್ದರು ಎಂದು ಸ್ಮರಿಸಿದರು.
ಖ್ಯಾತ ಹಿಂದೂಸ್ತಾನಿ ಸಂಗೀತ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಕೃತಿಯನ್ನು ಬಿಡುಗಡೆ ಮಾಡಿ, “ಅವ್ವನ ರೂಪದಲ್ಲಿ ಭಗವಂತನೇ ಭೂಮಿಯ ಮೇಲೆ ಇದ್ದಾನೆ” ಎಂಬ ಮನಮುಟ್ಟುವ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿ ಜಯರಾಮ್ ರಾಯಪೂರ, ಮಾಜಿ ಸಚಿವ ಎಸ್. ಎಸ್. ಪಾಟೀಲ, ಮಾಜಿ ಸಂಸದ ಪ್ರೊ. ಐ. ಜಿ. ಸನದಿ, ಶಾಸಕರಾದ ಅರವಿಂದ ಬೆಲ್ಲದ, ಸಿ. ಸಿ. ಪಾಟೀಲ, ದಾನಪ್ಪ ಕಬ್ಬೇರ, ಮಹೇಶ್ ಬೊಮ್ಮಾಯಿ, ಭರತ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕೃತಿಯ ಲೇಖಕ ಚಂದ್ರಶೇಖರ ವಸ್ತ್ರದ ಅವರನ್ನು ಬಸವರಾಜ ಬೊಮ್ಮಾಯಿ ಅಭಿನಂದಿಸಿದರು.
