ದೇವರ ಹಿಪ್ಪರಗಿ: “ಶ್ರೀ ವೀರಸಂಗಮೇಶ್ವರರು ಕೇವಲ ಒಬ್ಬ ವ್ಯಕ್ತಿಯಾಗಿರಲಿಲ್ಲ, ಅವರು ಈ ಭಾಗದ ಜನರ ಪಾಲಿನ ನಡೆದಾಡುವ ದೇವರು. ಶರಣರ ಜೀವನ ನಮಗೆ ಅಹಿಂಸೆ, ಕಾಯಕ ಮತ್ತು ದಾಸೋಹದ ಹಾದಿಯನ್ನು ತೋರಿಸಿಕೊಟ್ಟಿದೆ,” ಎಂದು ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ್ ಹೇಳಿದರು.
ಸಮೀಪದ ಸುಕ್ಷೇತ್ರ ಗಡಿಸೋಮನಾಳ ಗ್ರಾಮದ ಆರಾಧ್ಯ ದೈವ ಶ್ರೀ ವೀರಸಂಗಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ‘ಆಧ್ಯಾತ್ಮಿಕ ಪ್ರವಚನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಾತ್ರೆಯ ಮಹತ್ವದ ಕುರಿತು ಮಾತನಾಡಿದ ಶಾಸಕರು, “ಈ ಜಾತ್ರೆಯು ಕೇವಲ ಒಂದು ಆಚರಣೆಯಲ್ಲ, ಅದು ಶರಣರ ತತ್ವಗಳನ್ನು ಮರುಮನನ ಮಾಡಿಕೊಳ್ಳುವ ಪವಿತ್ರ ಸಮಯ. ಈ ಪುಣ್ಯಕ್ಷೇತ್ರವು ನಮ್ಮ ಮನಸ್ಸಿನ ಮೈಲಿಗೆಯನ್ನು ತೊಳೆದು ಭಕ್ತಿಯ ಬೆಳಕನ್ನು ಚೆಲ್ಲುತ್ತದೆ. ನಾವೆಲ್ಲರೂ ಧರ್ಮದ ಹಾದಿಯಲ್ಲಿ ನಡೆಯುವಂತಾಗಲಿ,” ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಜೆಪಿ ಮುಖಂಡರಾದ ಶ್ರೀ ಬಸನಗೌಡ ಎಸ್. ಪಾಟೀಲ (ಯಡಿಯಾಪುರ) ಅವರು ವೇದಿಕೆಯ ಮೇಲಿದ್ದ ಎಲ್ಲಾ ಪೂಜ್ಯರಿಗೆ ಸನ್ಮಾನಿಸಿ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಶಾಸಕರು ಹಾಗೂ ಗಣ್ಯರಿಗೆ ಗ್ರಾಮಸ್ಥರು ಹಾಗೂ ದೇವಸ್ಥಾನದ ಸಮಿತಿಯ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು.
ವೇದಿಕೆಯ ಮೇಲೆ ವಿವಿಧ ಮಠಾಧೀಶರು, ಗ್ರಾಮದ ಹಿರಿಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ಪ್ರವಚನ ಕಾರ್ಯಕ್ರಮದಲ್ಲಿ ಗಡಿಸೋಮನಾಳ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡು ಪುನೀತರಾದರು
