ಲಿಂಗಸೂಗೂರ ತಾಲೂಕಿನ ರಜಪೂತ ಸಮಾಜದ ಮುಖಂಡರು ಕರ್ನಾಟಕ ರಾಜ್ಯದಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ರಜಪೂತ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ “ರಜಪೂತ ಅಭಿವೃದ್ಧಿ ಮಂಡಳಿ” ಸ್ಥಾಪಿಸಬೇಕೆಂದು ಸರ್ಕಾರದ ಮಟ್ಟದಲ್ಲಿ ಶಿಫಾರಸು ಮಾಡುವಂತೆ ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.
ಮನವಿಯಲ್ಲಿ ರಾಜ್ಯದಲ್ಲಿ ಲಕ್ಷಾಂತರ ಜನಸಂಖ್ಯೆ ಹೊಂದಿರುವ ರಜಪೂತ ಸಮಾಜವು ಆರ್ಥಿಕ, ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಸಾಕಷ್ಟು ಹಿನ್ನಡೆಯಲ್ಲಿದ್ದು, ಯುವಪೀಳಿಗೆಗೆ ಅಗತ್ಯ ಮಾರ್ಗದರ್ಶನ ಮತ್ತು ಪ್ರೋತ್ಸಾಹದ ಕೊರತೆಯಿಂದ ಸಮಾಜವು ಇನ್ನೂ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲಾಡಳಿತದ ಮೇಲ್ವಿಚಾರಣೆಯಲ್ಲಿ ರಜಪೂತ ಸಮಾಜದ ಕೌಟುಂಬಿಕ ಸಮೀಕ್ಷೆ ಹಾಗೂ ಡಿಜಿಟಲ್ ನೋಂದಣಿ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದ್ದು, ಅದರ ಸಮಗ್ರ ದತ್ತಾಂಶ ವರದಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗದ ಆಯೋಗ ಪರಿಶೀಲನೆಯಲ್ಲಿದೆ ಎಂದು ತಿಳಿಸಲಾಗಿದೆ.
ಕಲಬುರಗಿಯಲ್ಲಿ ಆರಂಭವಾದ ಈ ಪ್ರಕ್ರಿಯೆಗೆ ಬೆಂಬಲವಾಗಿ ಇದೀಗ ಲಿಂಗಸೂಗೂರು ತಾಲೂಕಿನ ರಜಪೂತ ಸಮಾಜದ ಬಂಧುಗಳೂ ಧ್ವನಿಗೂಡಿಸಿದ್ದು, ಸಮಾಜದ ಏಳಿಗೆಗಾಗಿ “ರಜಪೂತ ಅಭಿವೃದ್ಧಿ ಮಂಡಳಿ”ಯನ್ನು ತಕ್ಷಣ ಸ್ಥಾಪಿಸಲು ಮಾನ್ಯ ಮುಖ್ಯಮಂತ್ರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಸಂಬಂಧಪಟ್ಟ ಆಯೋಗಕ್ಕೆ ತಾಲೂಕು ಆಡಳಿತದ ಪರವಾಗಿ ತುರ್ತು ಶಿಫಾರಸ್ಸು ಪತ್ರ ಕಳುಹಿಸಿಕೊಡಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಜಪೂತ ಯುವಶಕ್ತಿ ಸಂಘಟನೆಯ ರಾಜ್ಯ ಸಂಚಾಲಕ ಮಹಾದೇವ ಪ್ರಸಾದ್ ತಿವಾರಿ, ತಾಲೂಕು ರಜಪೂತ ಸಮಾಜದ ಅಧ್ಯಕ್ಷ ಸುಧೀರ್ ಕುಮಾರ ಶ್ರೀವಾಸ್ತವ್, ಪ್ರಧಾನ ಕಾರ್ಯದರ್ಶಿ ದುರ್ಗಾ ಸಿಂಗ್, ಮಾಜಿ ಅಧ್ಯಕ್ಷ ದಶರಥ ಸಿಂಗ್, ರಘುನಾಥ್ ಸಿಂಗ್, ಮಂಜುನಾಥ್ ಸಿಂಗ್, ಶಿವರಾಜ್ ಸಿಂಗ್, ಸುಧೀರ್ ಸಿಂಗ್, ವಿಕ್ರಮ್ ಸಿಂಗ್, ತುಳಜಾರಾಮ್ ಸಿಂಗ್, ವೆಂಕಟೇಶ್ ಸಿಂಗ್ ಹಜೇರಿ, ರಘುವೀರ್ ಸಿಂಗ್ ಸೇರಿದಂತೆ ಹಲವರು ಹಾಜರಿದ್ದರು.
