ಭಕ್ತಗಣದಿಂದ ಉದೋ ಉದೋ ಘೋಷ ಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ
ಕೊಪ್ಪಳ ಮೇ 11 (ಕ.ವಾ.): ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವವವು ಮೇ 11ರಂದು ವಿಜ್ರಂಭಣೆಯಿಂದ ನೆರವೇರಿತು.
ಕೊಪ್ಪಳ ತಾಲೂಕಿನ ಸುಕ್ಷೇತ್ರ ಹುಲಿಗಿ ಗ್ರಾಮದಲ್ಲಿ ಗೋಧೂಳಿ ಸಮಯ ಸಂಜೆ ಸರಿಯಾಗಿ 5.30ಕ್ಕೆ ಆರಂಭಗೊಂಡ ರಥೋತ್ಸವದ ಚಾಲನಾ ಸಮಾರಂಭಕ್ಕೆ ಕೊಪ್ಪಳ ಸೇರಿದಂತೆ ಗಡಿ ಜಿಲ್ಲೆ ವಿಜಯನಗರ, ಬಳ್ಳಾರಿ, ಗದಗ, ರಾಯಚೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ಧ ಲಕ್ಷಾಂತರ ಭಕ್ತರು ಸಾಕ್ಷಿಯಾಗಿ ಜಯಘೋಷ ಮೊಳಗಿಸಿದರು.
ಜಗನ್ಮಾತೆ ಶ್ರೀ ಹುಲಿಗೆಮ್ಮದೇವಿ ಮೂರ್ತಿಯೊಂದಿಗೆ ಸಾಗಿದ
ತೇರು ಪಾದಗಟ್ಟೆ ತಲುಪಿ ಮರಳಿ ಸ್ವಸ್ಥಾನಕ್ಕೆ ಬಂದು ಸೇರುತ್ತಿದ್ದಂತೆ ಭಕ್ತ ಸಮೂಹದಿಂದ ಕರತಾಡನ ಕೇಳಿ ಬಂದಿತು. ಉದೋ ಉದೋ ಊದೋ.. ಹುಲಿಗೆಮ್ಮ ಎಂದು ಭಕ್ತರು ಮತ್ತೆ ಮತ್ತೆ ಘೋಷಣೆ ಮೊಳಗಿಸಿದರು.
ಸಮಾರಂಭದಲ್ಲಿ ಸಂಸದರಾದ ರಾಜಶೇಖರ ಹಿಟ್ನಾಳ, ಪರಿಷತ್ ಶಾಸಕರಾದ ಹೇಮಲತಾ ನಾಯಕ, ಮಾಜಿ ಸಂಸದರಾದ ಸಂಗಣ್ಣ ಕರಡಿ ಸೇರಿದಂತೆ ಅನೇಕ ಹಿರಿಯ ಗಣ್ಯರು ಭಾಗಿಯಾಗಿ ಪೂಜೆ ಸಲ್ಲಿಸಿದರು.
ಎಸ್ಪಿ ಡಾ.ರಾಮ್ ಎಲ್ ಅರಸಿದ್ದಿ ಅವರ ಮಾರ್ಗದರ್ಶನದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಶ್ರೀ ಹುಲಿಗೆಮ್ಮ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಹಾಗೂ ಕಾರ್ಯದರ್ಶಿ ಪ್ರಕಾಶರಾವ್, ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷರಾದ ದಯಾನಂದ ಸ್ವಾಮೀಜಿ ಸೇರಿದಂತೆ ಹುಲಿಗಿ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು, ಹುಲಿಗಿ ಸೇರಿದಂತೆ ಸುತ್ತಲಿನ ಅನೇಕ ಗ್ರಾಮಗಳ ಸದ್ಭಕ್ತರು ಇದ್ದರು.
