ಅಥಣಿ: ತಾಲೂಕಿನ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಅಥಣಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಉಪವಿಭಾಗ ಕಚೇರಿ ನಿರ್ಮಾಣಕ್ಕೆ ಶನಿವಾರ ಚಾಲನೆ ನೀಡಲಾಯಿತು.
ನಗರದ ಚಿತ್ರ ರೋಡ್ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪ ನಡೆದ ಕಾರ್ಯಕ್ರಮದಲ್ಲಿ ಸಹಕಾರ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ₹1 ಕೋಟಿ ಅಂದಾಜು ವೆಚ್ಚದ ನೂತನ ಕಚೇರಿ ಕಟ್ಟಡದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಲಕ್ಷ್ಮಣ ಸವದಿ, “ಅಥಣಿ ತಾಲೂಕು ಕೃಷಿ ಪ್ರಧಾನ ಪ್ರದೇಶವಾಗಿದ್ದು, ರೈತರ ಬದುಕಿಗೆ ನೀರಾವರಿ ಅತ್ಯಂತ ಪ್ರಮುಖವಾಗಿದೆ. ನೀರಿನ ಲಭ್ಯತೆ ಇರುವ ಕಡೆ ಮಾತ್ರ ಕೃಷಿ ಅಭಿವೃದ್ಧಿ ಸಾಧ್ಯ. ಹೀಗಾಗಿ ಸಣ್ಣ ನೀರಾವರಿ ಯೋಜನೆಗಳು, ಕೆರೆಗಳ ಅಭಿವೃದ್ಧಿ ಹಾಗೂ ಅಂತರ್ಜಲ ಸಂರಕ್ಷಣೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ” ಎಂದರು.
“ಸರ್ಕಾರದ ಯೋಜನೆಗಳ ಪ್ರಯೋಜನ ನೇರವಾಗಿ ರೈತರಿಗೆ ತಲುಪಬೇಕು. ಇಲಾಖೆಯ ಕಚೇರಿ ನಿರ್ಮಾಣದಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಉತ್ತಮ ಕಾರ್ಯನಿರ್ವಹಣಾ ವ್ಯವಸ್ಥೆ ದೊರೆಯುವುದರ ಜತೆಗೆ ರೈತರು ಮತ್ತು ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ಅನುಕೂಲವಾಗಲಿದೆ. ಕಟ್ಟಡ ಕಾಮಗಾರಿಯನ್ನು ಗುಣಮಟ್ಟ ಕಾಪಾಡಿಕೊಂಡು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಥಣಿ ತಾಲೂಕಿನ ವಿವಿಧ ಭಾಗಗಳಲ್ಲಿ ನೀರಾವರಿ ಸೌಲಭ್ಯ ವಿಸ್ತರಣೆ, ಕೆರೆಗಳ ಅಭಿವೃದ್ಧಿ, ನೀರು ಸಂಗ್ರಹಣೆ ಹಾಗೂ ಅಂತರ್ಜಲ ಮಟ್ಟ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬರಗಾಲದ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ನೀರಿನ ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
₹1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಉಪವಿಭಾಗ ಕಚೇರಿಯಿಂದ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯ ಆಡಳಿತಾತ್ಮಕ ಕಾರ್ಯಗಳು ಇನ್ನಷ್ಟು ವ್ಯವಸ್ಥಿತವಾಗಲಿದ್ದು, ತಾಲೂಕಿನ ವಿವಿಧ ನೀರಾವರಿ ಕಾಮಗಾರಿಗಳ ಮೇಲ್ವಿಚಾರಣೆ ಹಾಗೂ ಸಾರ್ವಜನಿಕರ ಸೇವೆಗೆ ಅನುಕೂಲವಾಗಲಿದೆ.
ಕಾರ್ಯಕ್ರಮದಲ್ಲಿ ದಿಲೀಪ ಲೋಣಾರೆ, ದತ್ತಾ ವಾಸ್ಟರ್, ಶಿವಾನಂದ ದಿವಾನಮಳ, ರಮೇಶ ಗಾಣಿಗೇರ, ಸಂತೋಷ ಗಾಣಿಗೇರ, ಪ್ರವೀಣ ಹುಣಸಿಕಟ್ಟಿ, ಮಲ್ಲಿಕಾರ್ಜುನ ಮಗಡುಮ, ಅರುಣ್ ಯಲಗುದ್ರಿ, ಬಸಗೌಡ ಕಾಗೆ, ರಾಜು ಗುಡೋಡಗಿ, ಮಲ್ಲು ಹುದ್ದಾರ್, ಪ್ರವೀಣ ಪಾಟೀಲ, ಕಂದಾಯ ನಿರೀಕ್ಷಕ ಸಂತೋಷ ಬಾಯನಾಯಕ, ಮಾಂತೇಶ ಅಂಬೋಲಿ, ಶಬ್ಬೀರ್ ಪಾರ್ಥನಳ್ಳಿ, ಪ್ರಾಚಾರ್ಯ ವಿಲಾಸ್ ಕಾಂಬಳೆ, ಎಸ್.ಐ. ಶೇಗುಣಸಿ, ಸುಂದರ ಸೌದಾಗರ, ಕಲ್ಲೇಶ ಮಡ್ಡಿ, ವೀರಣ್ಣ ವಾಲಿ, ರಾಮಗೊಂಡ ಪಾಟೀಲ ಸೇರಿದಂತೆ ಮುಖಂಡರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
