Tuesday, August 11, 2026
HomeUncategorizedಬರದ ಸಂಕಷ್ಟದಲ್ಲಿ ರೈತನ ಬೆನ್ನಿಗೆ ನಿಂತ ಹೆಬ್ಬಾರ್: ಕೆರೆಗಳಿಗೆ ಹರಿಯುತ್ತಿದೆ ಜೀವಜಲ

ಬರದ ಸಂಕಷ್ಟದಲ್ಲಿ ರೈತನ ಬೆನ್ನಿಗೆ ನಿಂತ ಹೆಬ್ಬಾರ್: ಕೆರೆಗಳಿಗೆ ಹರಿಯುತ್ತಿದೆ ಜೀವಜಲ

ಮುಂಡಗೋಡ, ಆಗಸ್ಟ್ 10 : ಮಳೆ ಕೈಕೊಟ್ಟರೂ ರೈತನ ಕೈಬಿಡಬಾರದು ಎಂಬ ಸಂಕಲ್ಪದೊಂದಿಗೆ, ಬರದ ಸಂಕಷ್ಟದ ಸಂದರ್ಭದಲ್ಲಿ ಕ್ಷೇತ್ರದ ರೈತರ ಬದುಕಿಗೆ ನೀರಿನ ಭರವಸೆ ನೀಡುವ ನಿಟ್ಟಿನಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ಕೈಗೊಂಡಿರುವ ಮಹತ್ವಾಕಾಂಕ್ಷೆಯ ಕೆರೆ ನೀರು ತುಂಬಿಸುವ ಯೋಜನೆ ಇದೀಗ ಜನರ ಗಮನ ಸೆಳೆಯುತ್ತಿದೆ.

ಕೃಷಿಯೇ ಬದುಕಿನ ಆಧಾರವಾಗಿರುವ ಗ್ರಾಮೀಣ ಪ್ರದೇಶಗಳಲ್ಲಿ ಮಳೆಯ ಕೊರತೆ ರೈತರನ್ನು ಆತಂಕಕ್ಕೆ ದೂಡಿರುವ ಸಂದರ್ಭದಲ್ಲಿ, ಕವಲಗಿ ಹೊಳೆಯಿಂದ ನೀರನ್ನು ಹರಿಸಿ ಕೆರೆಗಳನ್ನು ತುಂಬಿಸುವ ಯೋಜನೆ ರೈತರ ಪಾಲಿಗೆ ಆಶಾಕಿರಣವಾಗಿದೆ.

ಮುಂಡಗೋಡ ತಾಲೂಕಿನ ಪಾಳಾ, ಕೋಡಂಬಿ, ಕಾತೂರ, ನಾಗನೂರು, ಮಳಗಿ, ಓಣಿಕೇರಿ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ನಡೆಯುತ್ತಿದ್ದು, ಒಟ್ಟು 84 ಕೆರೆಗಳನ್ನು ತುಂಬಿಸುವ ಗುರಿಯಲ್ಲಿ ಈಗಾಗಲೇ 50 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.

ನೀರಿನ ಮಹತ್ವವನ್ನು ಅರಿತು, ರೈತರ ಭವಿಷ್ಯವನ್ನು ಕೇಂದ್ರವಾಗಿಟ್ಟುಕೊಂಡು ಕೈಗೊಂಡಿರುವ ಈ ಕಾರ್ಯದಿಂದ ಶಾಸಕ ಶಿವರಾಮ ಹೆಬ್ಬಾರ್ ಅವರು ಕ್ಷೇತ್ರದ ರೈತರ ಪಾಲಿಗೆ ‘ಆಧುನಿಕ ಭಗೀರಥ’ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದಾರೆ.

ಇದು ಕೇವಲ ಒಂದು ನೀರಾವರಿ ಯೋಜನೆಯಲ್ಲ;ಇದು ರೈತನ ಬದುಕಿನ ಮೇಲಿನ ಕಾಳಜಿ,
ಕೃಷಿಯ ಭವಿಷ್ಯದ ಮೇಲಿನ ದೂರದೃಷ್ಟಿ,ಮತ್ತು ಬರದ ಸಂಕಷ್ಟದಲ್ಲಿ ರೈತನೊಂದಿಗೆ ನಿಂತಿರುವ ಜನಪರ ಬದ್ಧತೆಯ ಪ್ರತೀಕ.

ಹೆಚ್ಚಿನ ಸುದ್ದಿ