ಬೈಲಹೊಂಗಲ: ನಗರದಲ್ಲಿರುವ ಸ್ವಾತಂತ್ರ್ಯಹೋರಾಟದ ಪ್ರಥಮ ಬೆಳ್ಳಿ ಚುಕ್ಕಿ ಕಿತ್ತೂರು ರಾಣಿ ಚನ್ನಮ್ಮಾಜಿ ಅವರ ಐಕ್ಯ ಸ್ಥಳಕ್ಕೆ ಗೃಹ ಸಚಿವ ಜಿ. ಪರಮೇಶ್ವರ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ಐಕ್ಯ ಸ್ಥಳ ಹಾಗೂ ನವೀಕರಿಸಲಾದ ರಾಕ್ ಗಾರ್ಡನ್ ವೀಕ್ಷಿಸಿದರು.
ನಯಾನಗರ ಗ್ರಾಮದ ಸುಖದೇವಾನಂದ ಮಠದ ಜಾತ್ರಾ ಮಹೋತ್ಸವದಲ್ಲಿ ಅವರ ಭಾಗವಹಿಸಲು ಆಗಮಿಸಿದ್ದ ಸಚಿವರು, ಬೈಲಹೊಂಗಲ ನಗರಕ್ಕೆ ಭೇಟಿ ನೀಡಿ ಶಾಸಕ ಮಹಾಂತೇಶ ಕೌಜಲಗಿ ಅವರ ನಿವಾಸಕ್ಕೆ ತೆರಳಿ, ಮಾಜಿ ಸಚಿವ ಶಿವಾನಂದ ಕೌಜಲಗಿ ಆರೋಗ್ಯ ಕುಶಲೋಪರಿ ವಿಚಾರಿಸಿದರು. ನಂತರ ಚನ್ನಮ್ಮಾಜಿಯ ಐಕ್ಯ ಸ್ಥಳಕ್ಕೆ ತೆರಳಿ ಗೌರವ ನಮನ ಸಲ್ಲಿಸಿದರು.
ಈ ವೇಳೆ ಶಾಸಕ ಮಹಾಂತೇಶ ಕೌಜಲಗಿ ಅವರು ಚನ್ನಮ್ಮಾಜಿಯ ಇತಿಹಾಸ ಹಾಗೂ ನವೀಕರಿಸಲಾದ ರಾಕ್ ಗಾರ್ಡನ್ ಕುರಿತು ಸಚಿವರಿಗೆ ಮಾಹಿತಿ ನೀಡಿದರು. ರಾಕ್ ಗಾರ್ಡನ್ ವೀಕ್ಷಿಸಿದ ಬಳಿಕ ಸಚಿವರು ಸುಖದೇವಾನಂದ ಮಠಕ್ಕೆ ತೆರಳಿ ಅಭಿನವ ಸಿದ್ದಲಿಂಗೇಶ್ವರ ಶ್ರೀಗಳ ಆಶೀರ್ವಾದ ಪಡೆದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ಸಚಿವರು, ರಾಜ್ಯದಲ್ಲಿಯೇ ಉತ್ತಮ ಹೆಸರು ಗಳಿಸಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಕಾಲೇಜಿನ ಗ್ರಂಥಾಲಯ ಅಭಿವೃದ್ಧಿಗಾಗಿ ಸ್ವತ 5 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಆಸೀಪ್ ಶೇಟ್, ಬೆಳಗಾವಿ ಐಜಿಪಿ ಚೇತನಸಿಂಗ್ ರಾಥೋಡ, ಎಸ್ಪಿಕೆ. ರಾಮರಾಜನ್, ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಮಹಾಂತೇಶ ಕಳ್ಳಿಬಡ್ಡಿ, ನಗರಸಭೆ ಪೌರಾಯುಕ್ತ ಭಾಗ್ಯ ತಿ ಹುಗ್ಗಿ, ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ,ಸೇರಿದಂತೆ ಅನೇಕ ಉಪಸ್ಥಿತರಿದ್ದರು.
