ಮುಂಡಗೋಡ : ನಗರದ ತಾಲೂಕು ಪಂಚಾಯತಿಯಲ್ಲಿ ಎಲ್ಲ ಅಧಿಕಾರಿ ಸಿಬ್ಬಂದಿ ಗಳಿಗೆ ಅಚ್ಚುಮೆಚ್ಚಿನ ಜವಾನರಾಗಿದ್ದ ನಾಗಾ ಮಂಜ ಪೂಜಾರಿ ದಿನಾಂಕ 31 ಜುಲೈ 2026ರಂದು ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದುತ್ತಿದ್ದು, ಅವರಿಗೆ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ವಾಯ್. ದಾಸನಕೊಪ್ಪ ಅವರು ಶುಭಹಾರೈಸಿದ್ದಾರೆ.
1994 ರಿಂದ ಇಲ್ಲಿಯವರೆಗೆ ಸುಮಾರು 32 ವರ್ಷಗಳ ಕಾಲ ಕಛೇರಿಯ ಜವಾನರಾಗಿ ಪೂಜಾರಿ ಅವರು ಅತ್ಯಂತ ಪ್ರಾಮಾಣಿಕತೆ, ದಕ್ಷತೆ ಹಾಗೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಇಲಾಖೆಯ ಏಳಿಗೆಗಾಗಿ ಅಪಾರ ಕೊಡುಗೆ ನೀಡಿದ್ದಾರೆ. ಎಲ್ಲ ಅಧಿಕಾರಿ ಸಿಬ್ಬಂದಿಗಳೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಅವರ ಸುದೀರ್ಘ ಮತ್ತು ಯಶಸ್ವಿ ಸೇವೆಯನ್ನು ಇಒ ದಾಸನಕೊಪ್ಪ ಅವರು ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ.
ಅವರ ಮುಂದಿನ ನಿವೃತ್ತ ಜೀವನವು ಸುಖ, ಶಾಂತಿ, ನೆಮ್ಮದಿ ಮತ್ತು ಆರೋಗ್ಯದಿಂದ ಕೂಡಿರಲಿ ಎಂದು ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.
