ವರದಿ :ಅಮರೇಶಣ್ಣ ಕಾಮನಕೇರಿ
ಬೆಂಗಳೂರು:ಬೀಳಗಿ ತಾಲ್ಲೂಕಿನ ರೈತರ ದಶಕಗಳ ಬೇಡಿಕೆಯಾಗಿದ್ದ ‘ಬೀಳಗಿ ಏತನೀರಾವರಿ ಯೋಜನೆ’ಗೆ ಅಂತಿಮವಾಗಿ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಈ ಪ್ರಮುಖ ಯೋಜನೆಯನ್ನು ಸಾಕಾರಗೊಳಿಸಲು ಸಹಕರಿಸಿದ ರಾಜ್ಯ ಜಲಸಂಪನ್ಮೂಲ ಸಚಿವರಾದ ರಾಮಲಿಂಗಾರೆಡ್ಡಿಯವರಿಗೆ, ಬೆಂಗಳೂರಿನ ವಿಧಾನಸೌಧದಲ್ಲಿ ಬೀಳಗಿ ಮತಕ್ಷೇತ್ರದ ಶಾಸಕರು ಮತ್ತು ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷರಾದ ಜಿ.ಟಿ. ಪಾಟೀಲ್ಅವರ ನೇತೃತ್ವದಲ್ಲಿ ಆಗಮಿಸಿದ ರೈತರು ಮತ್ತು ಬೀಳಗಿ ಕಾಂಗ್ರೆಸ್ ಪಕ್ಷದ ನಿಯೋಗವುವಿಶೇಷವಾಗಿ ಸನ್ಮಾನಿಸಿ, ಕೃತಜ್ಞತೆ ಸಲ್ಲಿಸಿತು.
ರೈತರ ಪರವಾಗಿ ಸಚಿವರ ಅಭೂತಪೂರ್ವ ಸ್ಪಂದನೆ:
ಬೀಳಗಿ ತಾಲ್ಲೂಕಿನ ಸೋನ್ನ ಗ್ರಾಮದ ಸಮೀಪ ಕೃಷ್ಣಾ ನದಿಯಿಂದ ನೀರನ್ನೆತ್ತಿ, ಘಟಪ್ರಭಾ ಎಡದಂಡೆ ಕಾಲುವೆಯ ಬೀಳಗಿ ಶಾಖಾ ಕಾಲುವೆಯ ಕಿ.ಮೀ 38.50 ರಿಂದ 44.20 ರವರೆಗಿನ ವ್ಯಾಪ್ತಿಯ ರೈತರ ಜಮೀನುಗಳಿಗೆ ನೀರಾವರಿ ಕಲ್ಪಿಸುವ ರೂ. 98.50 ಕೋಟಿಗಳ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ತಾಂತ್ರಿಕ ಮತ್ತು ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸಿ ಅನುಮೋದನೆ ದೊರಕಿಸಿಕೊಡುವಲ್ಲಿ ಸಚಿವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಸಚಿವರ ಈ ಜನಪರ ನಿರ್ಧಾರದಿಂದ ಬೀಳಗಿ ತಾಲ್ಲೂಕಿನ ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ.
ಸನ್ಮಾನ ಸಮಾರಂಭ:
ಈ ಸಂದರ್ಭದಲ್ಲಿ ಶಾಸಕ ಜಿ.ಟಿ. ಪಾಟೀಲ್ ಅವರೊಂದಿಗೆ ಆಗಮಿಸಿದ್ದ ರಾಮನಗೌಡ ಜಕ್ಕಣಗೌಡ್ರ, ಮಲ್ಲಪ್ಪ ಕೋಮಾರ ದೇಸಾಯಿ, ಶಿವಲಿಂಗಪ್ಪ ಮರಡಿ, ಸಿದ್ದು ಗಿರಗಾವಿ, ಹಣಮಂತಗೌಡ ಪಾಟೀಲ ಹಾಗೂ ಬಸವರಾಜ ಮೇಟಿ ಸೇರಿದಂತೆ ಇತರ ರೈತರು ಮತ್ತು ಬೀಳಗಿ ಕಾಂಗ್ರೆಸ್ ಪಕ್ಷದ ಮುಖಂಡರು ಸಚಿವ ರಾಮಲಿಂಗಾರೆಡ್ಡಿಯವರನ್ನು ಶಾಲು ಹೊದಿಸಿ, ಫಲತಾಂಬೂಲ ನೀಡಿ ಗೌರವಿಸಿದರು. ರೈತರ ಕಷ್ಟಕ್ಕೆ ಬೆನ್ನುಲುಬಾಗಿ ನಿಂತ ಸಚಿವರ ಬದ್ಧತೆಯನ್ನು ಈ ವೇಳೆ ನಿಯೋಗವು ಕೊಂಡಾಡಿತು.
ಯೋಜನೆಯ ವಿಶೇಷತೆ:
ಈ ರೂ. 98.50 ಕೋಟಿಗಳ ಪರಿಷ್ಕೃತ ಯೋಜನೆಯು ಬೀಳಗಿ ಶಾಖಾ ಕಾಲುವೆಯ ವ್ಯಾಪ್ತಿಯಲ್ಲಿರುವ ರೈತರ ಕೃಷಿ ಭೂಮಿಗೆ ನೀರಾವರಿ ಭಾಗ್ಯ ಕಲ್ಪಿಸಲಿದೆ. ಶಾಸಕ ಜಿ.ಟಿ. ಪಾಟೀಲ್ ಅವರು ನಿರಂತರವಾಗಿ ಸಚಿವರೊಂದಿಗೆ ಸಮಾಲೋಚನೆ ನಡೆಸಿ, ಸರ್ಕಾರದಿಂದ ಈ ಯೋಜನೆಗೆ ಅಗತ್ಯವಿರುವ ಅನುಮೋದನೆ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
