Thursday, March 26, 2026
Homeಟಾಪ್ ನ್ಯೂಸ್ಹೊಸ ಕ್ಯಾಲೆಂಡರ್ ವರ್ಷ 2026 : ಅಮಲಿನ ಸಂಭ್ರಮವಲ್ಲ, ಅರಿವಿನ ಆರಂಭವಾಗಲಿ

ಹೊಸ ಕ್ಯಾಲೆಂಡರ್ ವರ್ಷ 2026 : ಅಮಲಿನ ಸಂಭ್ರಮವಲ್ಲ, ಅರಿವಿನ ಆರಂಭವಾಗಲಿ

ಪ್ರತಿ ಹೊಸ ವರ್ಷ ಬಂದಾಗ ಒಂದೇ ದೃಶ್ಯಗಳು ಮಧ್ಯರಾತ್ರಿ ಗಂಟೆ ಹೊಡೆಯುತ್ತಿದ್ದಂತೆ ಕುಡುಕರ ಕೂಗು, ರಸ್ತೆಯಲ್ಲಿ ಅಲೆಯುವ ಕಿರಿಯ ವಯಸ್ಸಿನ ಹುಡುಗರು, ಮದ್ಯದ ಅಮಲಿನಲ್ಲಿ ತೇಲಾಡುವ ದೃಶ್ಯಗಳು. ಇದನ್ನೇ ಸಂಭ್ರಮವೆಂದು ಆಚರಿಸುವವರನ್ನು ನಾವು ಪ್ರತಿ ವರ್ಷ ದೃಶ್ಯ ಮಾಧ್ಯಮದ ಪರದೆಗಳಲ್ಲಿ ನೋಡುತ್ತ ಬಂದಿದ್ದೇವೆ. ಆದರೆ ಈ ದೃಶ್ಯಗಳು ಸಮಾಜಕ್ಕೆ ಏನು ಕಲಿಸುತ್ತಿವೆ? ಹೊಸ ಪೀಳಿಗೆಗೆ ಯಾವ ಸಂದೇಶ ಕೊಡುತ್ತಿವೆ?

ಹೊಸ ವರ್ಷ ಆಚರಣೆಯ ನೆಪದಲ್ಲಿ ಕಿರಿಯ ವಯಸ್ಸಿನವರೂ ಮಧ್ಯಪಾನ ಮತ್ತು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ಅತ್ಯಂತ ಗಂಭೀರ ವಿಷಯ. ಇತ್ತೀಚೆಗೆ ಕೆಲವು ದೃಶ್ಯ ಮಾಧ್ಯಮಗಳಲ್ಲಿ ಪ್ರತಿವರ್ಷ ಇಂತಹ ದೃಶ್ಯಗಳನ್ನು ಪ್ರಸಾರ ಮಾಡುವ ಮೂಲಕ ಅಜಾಗರೂಕತೆಯ ಸಂಭ್ರಮವನ್ನು ಸಾಮಾನ್ಯವೆಂದು ತೋರಿಸುತ್ತಿವೆ ಆದರೆ ಇದು ಅರಿವಿನ ಕೊರತೆಯಲ್ಲ ಹೊಣೆಗಾರಿಕೆಯ ಕೊರತೆ. ಅಮಲಿನ ದೃಶ್ಯಗಳು ಮನರಂಜನೆಯಲ್ಲ, ಅವು ಎಚ್ಚರಿಕೆಯ ಸಂಕೇತಗಳಾಗಬೇಕು.

ಮದ್ಯಪಾನ ಮಾಡಿ ರಸ್ತೆಗಳಲ್ಲಿ ತೇಲಾಡುವುದು ಶೌರ್ಯವಲ್ಲ, ಅದು ಬದುಕಿನ ಸೋಲು. ಕ್ಷಣಿಕ ಸಂಭ್ರಮಕ್ಕಾಗಿ ಜೀವ, ಆರೋಗ್ಯ, ಕುಟುಂಬ ಮತ್ತು ಭವಿಷ್ಯವನ್ನು ಪಣಕ್ಕಿಡುವ ಈ ಸಂಸ್ಕೃತಿ ಕಡಿಮೆಯಾಗಲೇಬೇಕು. ಹೊಸ ವರ್ಷ ಎಂದರೆ ಬಾಟಲಿ ತೆರೆಯುವುದು ಅಲ್ಲ ಕಣ್ಣು ತೆರೆಯುವುದು. ಯುವಜನತೆಗೆ ಇದು ತಿಳಿಯಬೇಕು ಮಧ್ಯಪಾನ ಹೊಸತನವಲ್ಲ, ಅದು ಹಳೆಯ ಸಮಸ್ಯೆಯ ಪುನರಾವೃತ್ತಿ.

ಮಾಧ್ಯಮಗಳು ಸಮಾಜದ ಕನ್ನಡಿಯೆಂದು ಹೇಳಲಾಗುತ್ತದೆ ಹಾಗಾದರೆ ಆ ಕನ್ನಡಿಯಲ್ಲಿ ಅಮಲಿನ ವಿಕೃತ ಚಿತ್ರಗಳ ಬದಲು ಅರಿವಿನ ಪ್ರತಿಬಿಂಬ ಕಾಣಬೇಕು. ಕಿರಿಯ ವಯಸ್ಸಿನವರು ತಪ್ಪು ದಾರಿಯಲ್ಲಿ ಹೋಗದಂತೆ ಎಚ್ಚರಿಸುವ ಕಾರ್ಯಕ್ರಮಗಳು, ವ್ಯಸನದ ದುಷ್ಪರಿಣಾಮಗಳನ್ನು ತಿಳಿಸುವ ಸಂದೇಶಗಳು ಹೊಸ ವರ್ಷದ ಸಂದರ್ಭದಲ್ಲಿ ಹೆಚ್ಚಾಗಬೇಕು. ಅಮಲನ್ನು ಉತ್ತೇಜಿಸುವ ಪ್ರಸಾರ ಕಡಿಮೆಯಾಗಬೇಕು ಅರಿವನ್ನು ಬೆಳೆಸುವ ಪ್ರಸಾರ ಹೆಚ್ಚಾಗಬೇಕು.

ಇನ್ನೊಂದೆಡೆ, ಬಡತನ ಇನ್ನೂ ಅನೇಕ ಕುಟುಂಬಗಳ ಬದುಕನ್ನು ಕತ್ತಲಲ್ಲಿ ಇಟ್ಟುಕೊಂಡಿದೆ. ಹೊಸ ವರ್ಷ ಶ್ರೀಮಂತರ ಪಾರ್ಟಿಗಳಲ್ಲಿ ಮುಗಿಯದೆ, ಬಡವರ ಬದುಕಿಗೆ ಬೆಳಕು ತರಬೇಕಿದೆ. ಎಲ್ಲ ವರ್ಗದ ಬಡವರು ಬಡತನದಿಂದ ಮುಕ್ತರಾಗುವ ಕನಸು ಕೇವಲ ಘೋಷಣೆಯಲ್ಲ, ಕಾರ್ಯರೂಪಕ್ಕೆ ಬರಬೇಕಾದ ಅಗತ್ಯ. ಆದ್ದರಿಂದ ಹೊಸ ವರ್ಷ ಆಚರಣೆಗೆ ಮಾತ್ರ ಸೀಮಿತವಾಗಬಾರದು. ಬದುಕಿನಲ್ಲೇ ಹೊಸತನ ಬರಬೇಕು. ಚಿಂತನೆ ಶುದ್ಧವಾಗಬೇಕು, ನಡವಳಿಕೆ ಜವಾಬ್ದಾರಿಯುತವಾಗಬೇಕು. ಅಮಲಿನ ಸಂಭ್ರಮಕ್ಕಿಂತ ಅರಿವಿನ ಬದುಕು ಶ್ರೇಷ್ಠ ಎಂಬ ಬುದ್ಧಿ ಹೊಸ ವರ್ಷದಲ್ಲಿ ಗಟ್ಟಿಯಾಗಬೇಕು.

ಈ ವರ್ಷ ಅಮಲಿನ ದೃಶ್ಯಗಳು ಕಡಿಮೆಯಾಗಲಿ, ಅರಿವಿನ ಬದುಕು ಹೆಚ್ಚಾಗಲಿ ಆಚರಣೆಗಷ್ಟೇ ಅಲ್ಲ, ಬದುಕಿಗೆ ಹೊಸತನ ಬರಲಿ.

ಶಿವಾನಂದ ಎನ್ ದೊಡ್ಡಮನಿ
ಪತ್ರಕರ್ತ

ಹೆಚ್ಚಿನ ಸುದ್ದಿ