ಅಥಣಿ: ಸಚಿವ ಸತೀಶ ಜಾರಕಿಹೊಳಿ ಅವರ ಮನೆ ಮೇಲೆ ನಡೆದಿರುವ ಜಾರಿ ನಿರ್ದೇಶನಾಲಯದ (ಇ.ಡಿ.) ದಾಳಿ ವಿಚಾರವಾಗಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ದೇಶದಲ್ಲಿ ಇ.ಡಿ. ಸೇರಿದಂತೆ ತನಿಖಾ ಸಂಸ್ಥೆಗಳ ದಾಳಿಗಳನ್ನು ಗಮನಿಸಿದರೆ, ಶೇ.95ರಷ್ಟು ದಾಳಿಗಳು ಎನ್ಡಿಎಯೇತರ ವಿರೋಧ ಪಕ್ಷಗಳ ನಾಯಕರ ಮೇಲೆಯೇ ನಡೆಯುತ್ತಿವೆ ಎಂದು ಸವದಿ ಅವರು ಆರೋಪಿಸಿದರು.
ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಮಸೀದಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ವಿಪಕ್ಷಗಳ ಪ್ರಮುಖ ನಾಯಕರನ್ನೇ ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ತನಿಖಾ ಸಂಸ್ಥೆಗಳನ್ನು ಬಳಸಲಾಗುತ್ತಿದೆ ಎಂಬ ಚರ್ಚೆ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದೆ” ಎಂದರು.
ಇ.ಡಿ. ದಾಳಿಗಳ ಮೂಲಕ ಕಾಂಗ್ರೆಸ್ ನಾಯಕರನ್ನು ದುರ್ಬಲಗೊಳಿಸುವ ಅಥವಾ ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸವದಿ, ಅವರು ಎರಡೂ ಉದ್ದೇಶಗಳು ಇದರ ಹಿಂದೆ ಇರುವ ಸಾಧ್ಯತೆ ಇದೆ ಎಂದು ಹೇಳಿದರು.
“ತನಿಖೆ, ಪ್ರಕರಣಗಳ ಹೆಸರಿನಲ್ಲಿ ನಾಯಕರನ್ನು ಹೆದರಿಸಿ ತಮ್ಮ ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಮತ್ತೊಂದೆಡೆ, ತಮ್ಮೊಂದಿಗೆ ಬರಲು ಒಪ್ಪದ ವಿರೋಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನವೂ ನಡೆಯುತ್ತಿದೆ” ಎಂದು ಆರೋಪಿಸಿದರು.
ಬೆಳಗಾವಿ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಮಾತನಾಡಿದ ಸವದಿ ಅವರು ಜಿಲ್ಲೆ ಮೊದಲ ಹಂತದ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಯಾಗದಿರುವುದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಕಾರಣವಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರದ ಉಪಗ್ರಹ ಆಧಾರಿತ ಸಮೀಕ್ಷೆಯಲ್ಲಿ ಕಬ್ಬು ಹಾಗೂ ತೋಟಗಾರಿಕೆ ಬೆಳೆಗಳು ಹಸಿರಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಮೊದಲ ಹಂತದ ಬರಪಟ್ಟಿಗೆ ಸೇರಿಸಲಾಗಿಲ್ಲ ಎಂದು ವಿವರಿಸಿದರು.
ಮಳೆ ಕೊರತೆ ಮುಂದುವರಿದರೆ ಸೆಪ್ಟೆಂಬರ್ 18–19ರ ನಂತರ ಜಿಲ್ಲೆಯ ತಾಲೂಕುಗಳನ್ನು ಎರಡನೇ ಹಂತದಲ್ಲಿ ಬರಪೀಡಿತ ಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಅಥಣಿಯ ವಿದ್ಯುತ್ ಸಮಸ್ಯೆ:
ಮಳೆ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಸಿದಿರುವ ಪರಿಣಾಮ ಅಥಣಿ ತಾಲೂಕಿನಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ. ರೈತರಿಗೆ ಎದುರಾಗುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಹೊರಗಿನಿಂದ ವಿದ್ಯುತ್ ಖರೀದಿಸಿ ಪೂರೈಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಣ್ಣಸಾಬ ಪರಪ್ಪ ಸಂಕೋನಟ್ಟಿ, ಅಪ್ಪಸಾಬ್ ಪಾಟೀಲ್, ಮೈನುಸಾಬ್ ಮಿರಾಗೋಳ, ಲಾಲಾಸಾಬ್ ಅನ್ನಸೀರಿ, ಮುತ್ತಣ್ಣ ಹಿಡಕಲ್, ಶಿವಾನಂದ ಮಲೇವಾಡಿ, ಬಾಬು ಪಾಟೀಲ್, ಭೂಪಲ್ ಹಳಿಂಗಳಿ, ಅಣ್ಣಸಾಬ್ ಯಂಡೋಳ್ಳಿ, ಭೀಮಪ್ಪ ಸಂಕೋನಟ್ಟಿ, ಶಿವಪ್ಪ ನೇಮಗೌಡ, ಉಸೇನ್ ಮೀರಾಗೋಳ, ಬಂದು ಅನ್ನಸೀರಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
