ವಿವೇಕ ಸ್ಮಾರಕ ಉದ್ಘಾಟನೆಗೆ ಪ್ರಧಾನಿ: ವಿಜಯೇಂದ್ರ
ಮೈಸೂರು: ಮೈಸೂರಿನ ವಿವೇಕ ಸ್ಮಾರಕವನ್ನು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಜೀ ಅವರು ಇದೇ ಆಗಸ್ಟ್ 1ರಂದು ಉದ್ಘಾಟಿಸಲಿದ್ದಾರೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, 1ರಂದು ಮಧ್ಯಾಹ್ನ 3.30ಕ್ಕೆ ಅವರು ಮೈಸೂರಿಗೆ ಆಗಮಿಸುವರು. ಸ್ಮಾರಕಕ್ಕೂ ಭೇಟಿ ಕೊಡುತ್ತಾರೆ. ಬಳಿಕ ಪಕ್ಕದ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮವಿದೆ. 8-10 ಸಾವಿರ ಮಕ್ಕಳೂ ಭಾಗವಹಿಸುತ್ತಾರೆ ಎಂದು ವಿವರ ನೀಡಿದರು. ಪ್ರಧಾನಿಯವರನ್ನು ಕರೆಸುವಂತೆ ಪರಮಪೂಜ್ಯ ಸ್ವಾಮೀಜಿ ಮನವಿ ಮಾಡಿದ್ದರು. ನನ್ನಲ್ಲೂ ಈ ಕುರಿತು ತಿಳಿಸಿದ್ದರು ಎಂದು ಹೇಳಿದರು.
ಗುಂಡು ಎಸೆತದಲ್ಲಿ ಪದಕ- ಅಭಿನಂದನೆ
ಕೆ.ಆರ್.ನಗರದ ಹಳ್ಳಿಯೊಂದರÀ ಬಡ ಕುಟುಂಬದ ಶಿಲ್ಪಾ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಗುಂಡು ಎಸೆತದಲ್ಲಿ ಪದಕ ಪಡೆದಿರುವುದು ಕೇವಲ ರಾಜ್ಯ ಮಾತ್ರವಲ್ಲದೇ ದೇಶದ ಹೆಮ್ಮೆ ಎಂದು ಅಭಿನಂದಿಸಿದರು.
ಯಥೇಚ್ಛವಾಗಿ ನೀರು ಹರಿಯಬಿಟ್ಟ ಸರಕಾರ..
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಆರ್ಎ) ನೀರು ಬಿಡುವಂತೆ ಸೂಚಿಸಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಾಧಿಕಾರವು ಸೂಚಿಸುವ ಮುನ್ನವೇ ಕಾಂಗ್ರೆಸ್ ಸರಕಾರವು ಯಥೇಚ್ಛವಾಗಿ ನೀರು ಹರಿದುಬಿಟ್ಟಿದೆ ಎಂದು ಆಕ್ಷೇಪಿಸಿದರು. ಕಾವೇರಿ ಕೊಳ್ಳದ ರೈತರು ಯಾರೂ ಬಿತ್ತನೆ ಮಾಡಬಾರದೆಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದರು. ಮುಖ್ಯಮಂತ್ರಿಗಳ ನಡವಳಿಕೆ ಗಮನಿಸಿದರೆ ‘ಮನೆಗೆ ಮಾರಿ- ಊರಿಗೆ ಉಪಕಾರಿ’ ಎಂಬಂತಿದೆ ಎಂದು ಟೀಕಿಸಿದರು. ಈ ಭಾಗದ ರೈತರ ದನ ಕರುಗಳಿಗೂ ಕುಡಿಯಲು ನೀರಿಲ್ಲದ ಪರಿಸ್ಥಿತಿ ಇದೆ. ಟ್ರಿಬ್ಯುನಲ್ ಆದೇಶಕ್ಕೆ ಮೊದಲೇ ನೀರು ಬಿಟ್ಟಿದ್ದಾರೆ. ನೀರು ನಿರ್ವಹಣಾ ಟ್ರಿಬ್ಯುನಲ್ ಮುಂದೆ ಸರಿಯಾದ ರೀತಿ ವಾದ ಮಂಡನೆ ಮಾಡದುದರ ಪರಿಣಾಮವಾಗಿ ಇಂಥ ತೀರ್ಪು ಟ್ರಿಬ್ಯುನಲ್ನಲ್ಲಿ ಬಂದಿದೆ ಎಂದು ವಿಶ್ಲೇಷಿಸಿದರು.
ಸಿಎಂ ಮುತುವರ್ಜಿ ವಹಿಸಲು ಆಗ್ರಹ
ರಾಜ್ಯದ ಕಾವೇರಿ ಕೊಳ್ಳದ ರೈತರ ರಕ್ಷಣೆ ಮಾಡುವುದು ರಾಜ್ಯ ಸರಕಾರದ, ಮುಖ್ಯಮಂತ್ರಿಗಳ ಕರ್ತವ್ಯ. ತಡಮಾಡದೇ ತಕ್ಷಣ ಮರುಪರಿಶೀಲನಾ ಅರ್ಜಿಯನ್ನು ಟ್ರಿಬ್ಯುನಲ್ ಮುಂದೆ ಹಾಕಬೇಕು. ಅಲ್ಲದೇ ಸಮರ್ಥ ರೀತಿಯಲ್ಲಿ ವಾದಿ ಮಂಡಿಸಿ ಎಂದು ಒತ್ತಾಯಿಸಿದರು. ರೈತರ ರಕ್ಷಣೆಗೆ ಮುಖ್ಯಮಂತ್ರಿಗಳೇ ಮುತುವರ್ಜಿ ವಹಿಸಬೇಕೆಂದು ಆಗ್ರಹಿಸಿದರು. ಯಾರನ್ನೋ ಖುಷಿಪಡಿಸಲು ನಮ್ಮ ರೈತರಿಗೆ ವಿಷ ಕೊಡುವ ಕೆಲಸ ಮಾಡುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಕದ್ದು ಮುಚ್ಚಿ ನೀರು ಬಿಡುವ ಕೆಲಸ
ಮುಖ್ಯಮಂತ್ರಿಗಳಿಗೆ ಟ್ರಿಬ್ಯುನಲ್ನಿಂದ ಇಂಥ ಆದೇಶ ಬರುವುದು ಗೊತ್ತಿಲ್ಲವೇ? ಅಥವಾ ಆದೇಶ ಬರುವುದು ಗೊತ್ತಿದ್ದರೂ ಹಿಂದೆ ಕದ್ದು ಮುಚ್ಚಿ ನೀರು ಬಿಡುವ ಕೆಲಸ ಮಾಡಿದ್ದು ಯಾಕೆ ಎಂದು ಕೇಳಿದರು. ಕಾವೇರಿ ಬೇಸಿನ್ನಲ್ಲಿ ಎಷ್ಟು ನೀರಿದೆ ಎಂಬ ಮಾಹಿತಿ ಮುಖ್ಯಮಂತ್ರಿಗಳಿಗೆ ಇರಲಿಲ್ಲವೇ ಎಂದು ಪ್ರಶ್ನಿಸಿದರು. ನಮ್ಮ ಪರಿಸ್ಥಿತಿ ಗೊತ್ತಿದ್ದರೂ, ರೈತರು ಬೆಳೆ ಬೆಳೆಯಲು ನೀರಿಲ್ಲದೇ ಪರದಾಡುವುದು ತಿಳಿದಿದ್ದರೂ ಯಾಕೆ ನೀರು ಬಿಡುವ ಕೆಲಸ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈಗಾಗಲೇ ಎಷ್ಟು ಟಿ.ಎಂ.ಸಿ. ನೀರು ಬಿಟ್ಟಿದ್ದಾರೆ? ಮಣ್ಣು ತಿನ್ನುವ ಕೆಲಸ ಮಾಡಿ, ಟ್ರಿಬ್ಯುನಲ್ ಮುಂದೆ ಸರಿಯಾಗಿ ವಾದವೂ ಮಂಡಿಸದೇ ಇದ್ದರೆ ರೈತರೇನು ಮಾಡಬೇಕು? ಎಂದು ಪ್ರಶ್ನಿಸಿದರು. ಕಾವೇರಿ ಕೊಳ್ಳದ ಹಿತರಕ್ಷಣೆಯಲ್ಲಿ ಮುಖ್ಯಮಂತ್ರಿಗಳು ಸಂಪೂರ್ಣ ವಿಫಲವಾಗಿದ್ದಾರೆ. ಕೂಡಲೇ ಮರುಪರಿಶೀಲನಾ ಅರ್ಜಿ ಹಾಕಬೇಕು ಎಂದು ಒತ್ತಾಯಿಸಿದರು.
ಸಚಿವಸಂಪುಟದ ಸರ್ಕಸ್ ಇವತ್ತಿಗೂ ಬಗೆಹರಿದಿಲ್ಲ
ರಾಜ್ಯ ಸಚಿವಸಂಪುಟದ ಸರ್ಕಸ್ ಇವತ್ತಿಗೂ ಬಗೆಹರಿದಿಲ್ಲ. ರೇಟ್ ಫಿಕ್ಸ್ ಆಗದೇ ಡೇಟ್ ಫಿಕ್ಸ್ ಆಗುತ್ತಿಲ್ಲ ಎಂದು ಅವತ್ತಿನಿಂದಲೇ ಹೇಳುತ್ತಿದ್ದೇನೆ ಎಂದು ಈ ಸಂಬಂಧ ಪ್ರಶ್ನೆಗೆ ಉತ್ತರಿಸಿದರು. ಮುಂದಿನ ವಾರ, ಮುಂದಿನ ವಾರ ಎಂದು ಹೇಳಿ ತಳ್ಳಿಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸಿದರು.
