Monday, August 3, 2026
Homeಟಾಪ್ ನ್ಯೂಸ್ಸಚಿವ ಸಂಪುಟ ಸೇರಲಿರುವ ಮಂಕಾಳು ವೈದ್ಯ: ರಾಜಭವನದಲ್ಲಿ ಇಂದು ಪ್ರಮಾಣ ವಚನ ಸಮಾರಂಭ

ಸಚಿವ ಸಂಪುಟ ಸೇರಲಿರುವ ಮಂಕಾಳು ವೈದ್ಯ: ರಾಜಭವನದಲ್ಲಿ ಇಂದು ಪ್ರಮಾಣ ವಚನ ಸಮಾರಂಭ

ಶ್ರಮಜೀವಿಯಿಂದ ಸಚಿವ ಸಂಪುಟದವರೆಗೆ: ಕರಾವಳಿಯ ನಾಯಕ ಮಂಕಾಳು ವೈದ್ಯರ ಸ್ಪೂರ್ತಿದಾಯಕ ರಾಜಕೀಯ ಪಯಣ

ಬೆಂಗಳೂರು: ಬೆಂಗಳೂರಿನ ಹೋಟೆಲೊಂದರಲ್ಲಿ ಕಾರ್ಮಿಕನಾಗಿ ದುಡಿದು ಬದುಕು ಕಟ್ಟಿಕೊಂಡಿದ್ದ ಸಾಮಾನ್ಯ ಮೀನುಗಾರ ಕುಟುಂಬದ ಯುವಕನೊಬ್ಬ, ಇಂದು ರಾಜ್ಯ ರಾಜಕಾರಣದ ಉತ್ತುಂಗಕ್ಕೇರಿ ಸಚಿವ ಸ್ಥಾನ ಅಲಂಕರಿಸಿರುವ ಕಥಾನಕ ನಿಜಕ್ಕೂ ಸ್ಪೂರ್ತಿದಾಯಕ. ಸಮಾಜಸೇವೆ ಹಾಗೂ ಜನರ ಮೇಲಿನ ನಿರಂತರ ಕಾಳಜಿಯ ಮೂಲಕ ಜನಮಾನಸದಲ್ಲಿ ನೆಲೆಸಿರುವ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳು ವೈದ್ಯ ಅವರ ರಾಜಕೀಯ ಯಶೋಗಾಥೆ ಕರಾವಳಿ ಭಾಗದ ರಾಜಕಾರಣದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಬಾಲ್ಯದ ಬಡತನ ಮತ್ತು ಕಷ್ಟದ ದಿನಗಳು:
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೈಲೂರು ಗ್ರಾಮದ ಕೊಪ್ಪದಮಕ್ಕಿಯಲ್ಲಿ 1972ರ ಜೂನ್ 5ರಂದು ಸುಬ್ಬ ವೈದ್ಯ ಮತ್ತು ಭಾಗೀರಥಿ ದಂಪತಿಯ ನಾಲ್ಕನೇ ಮಗುವಾಗಿ ಮಂಕಾಳು ವೈದ್ಯ ಜನಿಸಿದರು. ತಂದೆ ಮೀನುಗಾರಿಕೆ ನಡೆಸಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಆದರೆ ಮನೆಯ ಕಡುಬಡತನದಿಂದಾಗಿ ಮಂಕಾಳು ವೈದ್ಯರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೈಲೂರು ಹಾಗೂ ಪ್ರೌಢಶಿಕ್ಷಣವನ್ನು ಜನತಾ ವಿದ್ಯಾಲಯ ಮುರ್ಡೇಶ್ವರದಲ್ಲಿ ಮುಗಿಸಿದ ಬಳಿಕ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಬೇಕಾಯಿತು. ಜೀವನೋಪಾಯಕ್ಕಾಗಿ ಬೆಂಗಳೂರಿಗೆ ತೆರಳಿದ ಅವರು, ಅಲ್ಲಿನ ಹೋಟೆಲೊಂದರಲ್ಲಿ ನಾಲೈದು ವರ್ಷಗಳ ಕಾಲ ಕಾರ್ಮಿಕನಾಗಿ ಕೆಲಸ ಮಾಡಿ ಕಷ್ಟದ ದಿನಗಳನ್ನು ಎದುರಿಸಿದರು.

ಸ್ವಾವಲಂಬನೆ ಮತ್ತು ಉದ್ಯಮದ ಹೆಜ್ಜೆ:
ಬೆಂಗಳೂರಿನಲ್ಲಿ ಕಷ್ಟಪಟ್ಟು ದುಡಿದು ಅನುಭವ ಪಡೆದ ಬಳಿಕ ಸ್ವಗ್ರಾಮಕ್ಕೆ ವಾಪಸ್ಸಾದ ಮಂಕಾಳು ವೈದ್ಯರು, ಮುರ್ಡೇಶ್ವರದಲ್ಲಿ ಸ್ವಂತ ಹೋಟೆಲ್ ಉದ್ಯಮ ಆರಂಭಿಸಿದರು. ಇದರೊಂದಿಗೆ ಮೀನು ವ್ಯಾಪಾರವನ್ನೂ ಕೈಗೊಂಡು ಸ್ವಾವಲಂಬನೆಯ ಬದುಕು ಕಂಡುಕೊಂಡರು. ವ್ಯಾಪಾರದ ಜೊತೆಗೆ ಸ್ಥಳೀಯ ಜನರೊಂದಿಗೆ ಬೆರೆತುಕೊಂಡು, ಕಷ್ಟ-ಸುಖಗಳಿಗೆ ಸ್ಪಂದಿಸುವ ಗುಣದಿಂದಾಗಿ ಅವರು ಜನಪ್ರಿಯತೆ ಗಳಿಸತೊಡಗಿದರು.

ಸಮಾಜಸೇವೆಯಿಂದ ರಾಜಕೀಯ ಪ್ರವೇಶ:
ಸಮಾಜಸೇವೆಯೇ ಬದುಕಿನುದ್ದೇಶವಾಗಿಸಿಕೊಂಡಿದ್ದ ಮಂಕಾಳು ವೈದ್ಯರು ರಾಜಕೀಯ ರಂಗ ಪ್ರವೇಶಿಸಿದರು. ಜನಪರ ಕಾಳಜಿ ಮತ್ತು ಪ್ರಾಮಾಣಿಕ ಕಾರ್ಯವೈಖರಿಯಿಂದ ಭಟ್ಕಳ ಕ್ಷೇತ್ರದ ಮತದಾರರ ಒಲವು ಗಳಿಸಿ ಶಾಸಕರಾಗಿ ಆಯ್ಕೆಯಾದರು. ಒಮ್ಮೆ ಸೋಲಿನ ಕಹಿ ಅನುಭವ ಎದುರಾದರೂ, ಧೃತಿಗೆಡದೆ ಮತ್ತಷ್ಟು ಸಕ್ರಿಯವಾಗಿ ಜನರೊಟ್ಟಿಗೆ ಬೆರೆತರು. ಇದರ ಫಲವಾಗಿ ಎರಡನೇ ಬಾರಿ ಭರ್ಜರಿ ಗೆಲುವು ದಾಖಲಿಸಿದ ಇವರು, ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತಗಳ ಅಂತರದ ವಿಜಯಶಾಲಿಯಾಗಿ ಹೊರಹೊಮ್ಮಿದರು.

ಸಚಿವ ಸಂಪುಟಕ್ಕೆ ಎಂಟ್ರಿ ಮತ್ತು ಪ್ರಮುಖ ಜವಾಬ್ದಾರಿ:
ಎರಡನೇ ಅವಧಿಗೆ ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆ ಇವರ ರಾಜಕೀಯ ಅದೃಷ್ಟ ಕೈಹಿಡಿಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಒಲಿದುಬಂದಿತು. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಅವರು, ಪ್ರಸ್ತುತ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಮೀನುಗಾರ ಸಮುದಾಯದ ಪ್ರಮುಖ ಧ್ವನಿಯಾಗಿರುವ ಇವರು, ಕರಾವಳಿ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಸಮುದಾಯದ ಸಬಲೀಕರಣಕ್ಕೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಹೆಚ್ಚಿನ ಸುದ್ದಿ