Monday, August 10, 2026
Homeಪರಿಸರಕಾವೇರಿ ವಿವಾದ: ಸಂಕಷ್ಟ ಸೂತ್ರವೇ ಶಾಶ್ವತ ಪರಿಹಾರ, ರೈತರ ಹಿತ ರಕ್ಷಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ...

ಕಾವೇರಿ ವಿವಾದ: ಸಂಕಷ್ಟ ಸೂತ್ರವೇ ಶಾಶ್ವತ ಪರಿಹಾರ, ರೈತರ ಹಿತ ರಕ್ಷಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಮಳೆ ಕೈಕೊಟ್ಟ ಸಂದರ್ಭದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ ೪೦ ಟಿಎಂಸಿ ನೀರನ್ನು ಕಾಯ್ದಿರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕಾವೇರಿ ನದಿ ನೀರು ವಿಚಾರದ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡು ಅವರು ಪ್ರಮುಖ ಸಲಹೆಗಳನ್ನು ಮಂಡಿಸಿದರು.

ಸಭೆಯಲ್ಲಿ ಸಿದ್ದರಾಮಯ್ಯ ಮಂಡಿಸಿದ ಪ್ರಮುಖ ಅಂಶಗಳು:
ಐತಿಹಾಸಿಕ ನಿದರ್ಶನ: ಮಳೆ ಕೊರತೆ ಉಂಟಾದಾಗ ಸರ್ವಪಕ್ಷ ಸಭೆ ನಡೆಸುವುದು ವಾಡಿಕೆಯಾಗಿದ್ದು, ಕಳೆದ ೭೬ ವರ್ಷಗಳಲ್ಲಿ ಬರೋಬ್ಬರಿ ೨೫ ಬಾರಿ ಇಂತಹ ಸಭೆಗಳನ್ನು ನಡೆಸಿ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.

ಜಲಾಶಯಗಳ ಪ್ರಸ್ತುತ ಸ್ಥಿತಿ: ಪ್ರಸ್ತುತ ಕೊಡಗು ಹಾಗೂ ವಯನಾಡ್ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಕಬಿನಿ ಮತ್ತು ಹಾರಂಗಿ ಜಲಾಶಯಗಳು ಭರ್ತಿಯಾಗಿವೆ. ಕೆ.ಆರ್.ಎಸ್. (KRS) ಅಣೆಕಟ್ಟೆಯಲ್ಲಿ ೧೯ ಟಿಎಂಸಿ ನೀರು ಲಭ್ಯವಿದೆ.

ಕುಡಿಯುವ ನೀರಿಗೆ ೪೦ ಟಿಎಂಸಿ ಕಾಯ್ದಿರಿಸಿ: ‘ಎಲ್ ನೀನೋ’ ಪ್ರಭಾವದಿಂದ ತೀವ್ರ ಬರ ಪರಿಸ್ಥಿತಿ ಹಾಗೂ ಮಳೆ ಕೊರತೆ ಎದುರಾಗುವ ಮುನ್ಸೂಚನೆ ಇರುವುದರಿಂದ, ಕುಡಿಯುವ ನೀರಿನ ಅಗತ್ಯತೆಗಾಗಿ ಕನಿಷ್ಠ ೪೦ ಟಿಎಂಸಿ ನೀರನ್ನು ಕಾಯ್ದಿರಿಸುವುದು ಅತ್ಯಗತ್ಯ. ಈ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ಬೇಡ ಎಂದರು.

ತಮಿಳುನಾಡಿಗೆ ನೀರು ಬಿಡುವ ಆರೋಪ ಸುಳ್ಳು: ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡಲಾಗುತ್ತಿದೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು ಎಂದ ಅವರು, ಪ್ರಾಧಿಕಾರದ ಆದೇಶದಂತೆ ನೀರು ಬಿಡುವುದು ಅನಿವಾರ್ಯ ಎಂದರು. ಈ ಕುರಿತು ಸುಪ್ರೀಂ ಕೋರ್ಟ್‌ಗೆ ಹೋಗುವುದರಿಂದ ಪ್ರಯೋಜನವಿಲ್ಲ ಎಂದು ಅಭಿಪ್ರಾಯಪಟ್ಟರು.

ಸಂಕಷ್ಟ ಪರಿಹಾರ ಸೂತ್ರಕ್ಕೆ ಒತ್ತಾಯ: ಕೊರತೆ ಕಾಲದಲ್ಲಿ ನೀರನ್ನು ಯಾವ ರೀತಿ ಹಂಚಿಕೊಳ್ಳಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರ ಅಥವಾ ಸುಪ್ರೀಂ ಕೋರ್ಟ್ ಮೂಲಕ ಕಡ್ಡಾಯವಾಗಿ ಶಾಶ್ವತ ಹಾಗೂ ವೈಜ್ಞಾನಿಕ ಸಂಕಷ್ಟ ಪರಿಹಾರ ಸೂತ್ರ ರೂಪಿಸಬೇಕು. ಇದು ಜಾರಿಗೆ ಬಂದರೆ ಮಾತ್ರ ರಾಜ್ಯದ ರೈತರ ಹಿತ ಕಾಯಲು ಸಾಧ್ಯ ಎಂದರು.

ರೈತರ ಬೆಳೆಗಳಿಗೆ ನೀರು ಹಾಗೂ ಪರಿಹಾರ: ಕಬಿನಿ ಮತ್ತು ಹಾರಂಗಿ ಭರ್ತಿಯಾಗಿರುವುದರಿಂದ ರೈತರ ಬೆಳೆಗಳಿಗೆ ಕೂಡಲೇ ನೀರು ಒದಗಿಸಬೇಕು. ಒಂದು ವೇಳೆ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾದರೆ, ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಕೂಡಲೇ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.

ಹೆಚ್ಚಿನ ಸುದ್ದಿ