ಬೆಂಗಳೂರು, ಜುಲೈ 01,: ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾದ “SIR: Kartavya app forces Booth Level Officers to report to office twice for attendance” (ಎಸ್ಐಆರ್: ಕರ್ತವ್ಯ ಆ್ಯಪ್ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಜರಾತಿಗಾಗಿ ದಿನಕ್ಕೆ ಎರಡು ಬಾರಿ ಕಚೇರಿಗೆ ಬರುವಂತೆ ಒತ್ತಾಯಿಸುತ್ತಿದೆ) ಎಂಬ ವರದಿಯು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರಲ್ಲಿ ದಾರಿ ತಪ್ಪಿಸುವಂತಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಮತಗಟ್ಟೆ ಮಟ್ಟದ ಅಧಿಕಾರಿಗಳು (BLOs) ಕೇವಲ ಹಾಜರಾತಿ ಹಾಕುವ ಉದ್ದೇಶಕ್ಕಾಗಿಯೇ ಕಚೇರಿಗೆ ಖುದ್ದಾಗಿ ಹಾಜರಾಗಬೇಕು ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ವಾಸ್ತವ ಸ್ಥಿತಿಗೆ ತದ್ವಿರುದ್ಧವಾಗಿದೆ.
ಈ ಕುರಿತು ಈ ಕೆಳಗಿನ ಪ್ರಮುಖ ಅಂಶಗಳನ್ನು ಸ್ಪಷ್ಟಪಡಿಸಿದೆ:
’ಆನ್ ಅದರ್ ಡ್ಯೂಟಿ (OOD)’ ಸೌಲಭ್ಯ: ಕಚೇರಿಯಿಂದ ಹೊರಗಡೆ ಅಧಿಕೃತ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗಾಗಿಯೇ ‘ಕರ್ತವ್ಯ’ ಆಪ್ನಲ್ಲಿ ವಿಶೇಷವಾಗಿ “ಆನ್ ಅದರ್ ಡ್ಯೂಟಿ (OOD)” ಸೌಲಭ್ಯವನ್ನು ಅಳವಡಿಸಲಾಗಿದೆ.
ಕ್ಷೇತ್ರ ಅಧಿಕಾರಿಗಳಿಗೆ ವಿನಾಯಿತಿ: ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯದಲ್ಲಿ ತೊಡಗಿರುವ ಮತ್ತು ಮನೆ-ಮನೆಗೆ ಭೇಟಿ ನೀಡಿ ಕ್ಷೇತ್ರ ಕಾರ್ಯ ನಿರ್ವಹಿಸುತ್ತಿರುವ BLOಗಳು, ತಾವು ಇರುವ ಸ್ಥಳದಿಂದಲೇ ಈ OOD ಸೌಲಭ್ಯವನ್ನು ಬಳಸಿ ಹಾಜರಾತಿಯನ್ನು ದಾಖಲಿಸಬಹುದಾಗಿದೆ.
ಹೊಸ ನಿಯಮವಲ್ಲ: ಈ ಸೌಲಭ್ಯವೇನೂ ಹೊಸದಲ್ಲ. ‘ಕರ್ತವ್ಯ’ ಆ್ಯಪ್ಗೆ ಸಂಬಂಧಿಸಿದ ತರಬೇತಿ ಮತ್ತು ಓರಿಯಂಟೇಶನ್ ಅವಧಿಗಳಲ್ಲೇ ಈ ನಿಯಮವನ್ನು ಎಲ್ಲಾ ಇಲಾಖೆಗಳ ಗಮನಕ್ಕೆ ತರಲಾಗಿದೆ. ಅಲ್ಲದೆ, ಇದರ ಬಳಕೆಯ ಕುರಿತಾದ ಟ್ಯುಟೋರಿಯಲ್ ವಿಡಿಯೋಗಳನ್ನು ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕ ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲಾಗಿದೆ.
ಅರಿವು ಮೂಡಿಸಲು ಸೂಚನೆ: ಕಚೇರಿಯಿಂದ ಹೊರಗೆ ಕೆಲಸ ಮಾಡುವ ಸಿಬ್ಬಂದಿ ಈ OOD ವೈಶಿಷ್ಟ್ಯವನ್ನು ಬಳಸಿಕೊಳ್ಳುವಂತೆ ಈಗಾಗಲೇ ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇಲ್ಲಿ ಸಮಸ್ಯೆಯು ಆ್ಯಪ್ನಲ್ಲಿ ಸೌಲಭ್ಯ ಇಲ್ಲದಿರುವುದಲ್ಲ, ಬದಲಿಗೆ ಈಗಾಗಲೇ ಲಭ್ಯವಿರುವ ಸೌಲಭ್ಯವನ್ನು ಸರಿಯಾಗಿ ಬಳಸಿಕೊಳ್ಳುವುದಾಗಿದೆ.
ಹಾಜರಾತಿಗಾಗಿ BLOಗಳು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಮತ್ತು ಈ ಸೌಲಭ್ಯದ ಕುರಿತು ಅವರಿಗೆ ಸೂಕ್ತ ತಿಳುವಳಿಕೆ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ (Deputy Commissioners) ನಿರ್ದೇಶನ ನೀಡಲಾಗಿದೆ.
ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ತೊಡಗಿರುವ ಚುನಾವಣಾ ಆಯೋಗ ಮತ್ತು ಎಲ್ಲಾ ಅಧಿಕಾರಿಗಳಿಗೆ ಅಗತ್ಯವಿರುವ ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ನೀಡಲು ಕರ್ನಾಟಕ ಸರ್ಕಾರವು ಬದ್ಧವಾಗಿದೆ.
