ಬೆಂಗಳೂರು: ಕೆಪಿಎಸ್ಸಿಯಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಮನ ಬಂದಂತೆ ನೇಮಕಾತಿ ನಡೆಯುತ್ತಿತ್ತು. ಹಣ ಪಡೆದು ಭ್ರಷ್ಟಾಚಾರ ಮಾಡಿ ನೇಮಕಾತಿ ಆಗುತ್ತಿತ್ತು. ಈ ಸಂಬಂಧ ಇ.ಡಿ. ದಾಳಿ ಆದುದು ಒಳ್ಳೆಯ ಬೆಳವಣಿಗೆ ಎಂದು ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್ .ಅಶ್ವತ್ಥನಾರಾಯಣ್ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಪ್ರಶ್ನೆಗೆ ಇಂದು ಉತ್ತರಿಸಿದ ಅವರು, ಭ್ರಷ್ಟಾಚಾರ ನಿರ್ಮೂಲನೆ ನಡೆದು ಸ್ವಜನ ಪಕ್ಷಪಾತದಿಂದ ದೂರವಿದ್ದು ಪಾರದರ್ಶಕ ನೇಮಕಾತಿ ನಡೆಯಬೇಕು ಎಂದು ತಿಳಿಸಿದರು. ಮೆರಿಟ್ ಆಧರಿತ ನೇಮಕಾತಿ ಆಗಬೇಕು ಎಂದು ಆಶಿಸಿದರು.
ಇ.ಡಿ. ತನಿಖೆಯಂಥ ಸ್ವಚ್ಛಗೊಳಿಸುವ ಕಾರ್ಯ ಸತತವಾಗಿ ನಡೆಯಲಿ. ಹಿನ್ನೆಲೆ, ಮುನ್ನೆಲೆಯಲ್ಲಿ ಇರುವವರ ಹಾಗೂ ಹಸ್ತಕ್ಷೇಪ ಮಾಡಿದವರ ಮೇಲೆ ಸಂಪೂರ್ಣ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಿ ಅವರನ್ನು ಬಂಧಿಸಿ ಶಿಕ್ಷೆ ಕೊಡಬೇಕಿದೆ ಎಂದು ನುಡಿದರು.
ಹಣ ದುರುಪಯೋಗವನ್ನು ಹಿಂದಿನ ಸಿಎಂ ಒಪ್ಪಿಕೊಂಡಿದ್ದರು..
ನಾಗೇಂದ್ರ ಅವರ ರಾಜೀನಾಮೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯವಾಗಿ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಬಿಟ್ಟು ನಿಂತಂತಿದೆ; ಏನು ಮಾಡಿದರೂ ಜಯಿಸುತ್ತೇವೆ; ಏನು ಮಾಡಿದರೂ ನಡೆಯುತ್ತದೆ ಎಂಬ ಸ್ಥಿತಿ ಅವರದು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹಣ ದುರುಪಯೋಗ ಆದುದನ್ನು ಒಪ್ಪಿಕೊಂಡಿದ್ದರು. ವಾಲ್ಮೀಕಿ ನಿಗಮದ ವಾಲ್ಮೀಕಿ ಜನಾಂಗದ ಜನರಿಗೆ ಅನ್ಯಾಯ ಆಗಿದೆ ಎಂದು ಒಪ್ಪಿಕೊಂಡಿದ್ದರು ಎಂದು ಗಮನ ಸೆಳೆದರು. ತನಿಖೆ ನಡೆಯುತ್ತಿರುವಾಗಲೇ ಮತ್ತೊಮ್ಮೆ ಸಚಿವರನ್ನಾಗಿ ಮಾಡಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರಕಾರಕ್ಕೆ ಯಾವ ನೈತಿಕತೆ ಇದೆ? ಅವರಿಗೆ ಕಾನೂನಿನ ಬಗ್ಗೆ ಗೌರವ ಇದೆಯೇ ಎಂದರು. ನಾವು ಪ್ರತಿಪಕ್ಷವಾಗಿ ಇದನ್ನು ಬಯಲಿಗೆ ತರುತ್ತಿದ್ದೇವೆ ಎಂದು ಹೇಳಿದರು.
