Saturday, May 30, 2026
Homeರಾಜಕೀಯಸಿದ್ದರಾಮಯ್ಯ ಆಡಳಿತ ನೆನೆದು ಲಕ್ಷ್ಮಿ ಹೆಬ್ಬಾಳ್ಕರ್​​ ಭಾವನಾತ್ಮಕ ಪೋಸ್ಟ್

ಸಿದ್ದರಾಮಯ್ಯ ಆಡಳಿತ ನೆನೆದು ಲಕ್ಷ್ಮಿ ಹೆಬ್ಬಾಳ್ಕರ್​​ ಭಾವನಾತ್ಮಕ ಪೋಸ್ಟ್

ಸ್ಥಾನಗಳು ಬದಲಾಗಬಹುದು, ಆದರೆ ಜನಮನದಲ್ಲಿ ಶಾಶ್ವತವಾಗಿ ಉಳಿಯುವ ನಾಯಕನಿಗೆ ವಿದಾಯ ಇರುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿಕಟಪೂರ್ವ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ (Laxmi Hebbalkar) ಸಿದ್ದರಾಮಯ್ಯ ಅವರ ಆಡಳಿತ ಮತ್ತು ವ್ಯಕ್ತಿತ್ವ ನೆನೆದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ

ನಮ್ಮೆಲ್ಲರ ಪ್ರೀತಿಯ ನಾಯಕ
ಮೈಸೂರಿನ ನೆಲದ ಒಂದು ಸಾಮಾನ್ಯ ರೈತ ಕುಟುಂಬದಿಂದ ಹೊರಟು, ಕರ್ನಾಟಕದ ಅತ್ಯುನ್ನತ ಹುದ್ದೆಯಾದ ಮುಖ್ಯಮಂತ್ರಿಯ ಸ್ಥಾನವನ್ನು ಅಲಂಕರಿಸಿದರೂ, ತಮ್ಮ ಅಧಿಕಾರದ ಕೊನೆಯ ಕ್ಷಣದವರೆಗೂ ಬಡವರ, ಹಿಂದುಳಿದವರ, ಶೋಷಿತರ ಮತ್ತು ದುರ್ಬಲರ ಧ್ವನಿಯಾಗಿಯೇ ಉಳಿದವರು ನಮ್ಮೆಲ್ಲರ ಪ್ರೀತಿಯ ನಾಯಕ ಸಿದ್ದರಾಮಯ್ಯನವರು ಎಂದಿದ್ದಾರೆ.

ಇಂದು ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಬಹುದು. ಆದರೆ ಒಂದು ಹುದ್ದೆಯಿಂದ ಇಳಿಯುವುದು ಮತ್ತು ಜನರ ಹೃದಯದಿಂದ ಇಳಿಯುವುದು ಎರಡು ಬೇರೆ ಸಂಗತಿಗಳು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಜನಪರ ಆಡಳಿತದ ಹೆಸರಿನಲ್ಲಿ ಅವರು ಬರೆದ ಅಧ್ಯಾಯ ಎಂದೆಂದಿಗೂ ಅಳಿಸಲಾಗದಂತಹದ್ದು. ಅವರು ಕೇವಲ ಮುಖ್ಯಮಂತ್ರಿ ಆಗಿರಲಿಲ್ಲ. ಅನೇಕ ಬಡ ಕುಟುಂಬಗಳ ಭರವಸೆ, ಅಸಂಖ್ಯಾತ ಯುವಕರ ಕನಸು, ಕೋಟ್ಯಾಂತರ ಕನ್ನಡಿಗರ ಆತ್ಮವಿಶ್ವಾಸವಾಗಿದ್ದರು ಎಂದು ಲಕ್ಷ್ಮೀ ಹೆಬ್ಬಾಳಕರ್ ಸ್ಮರಿಸಿದ್ದಾರೆ.

ನನ್ನ ವೈಯಕ್ತಿಕ ಜೀವನದಲ್ಲೂ ಸಿದ್ದರಾಮಯ್ಯನವರು ಕೇವಲ ರಾಜಕೀಯ ನಾಯಕನಲ್ಲ. ನಾನು ಸಂಕಷ್ಟಗಳನ್ನು ಎದುರಿಸಿದ ಸಂದರ್ಭಗಳಲ್ಲಿ ತಂದೆಯಂತೆ ಬೆನ್ನು ತಟ್ಟಿ ಧೈರ್ಯ ತುಂಬಿದವರು. ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ನೀಡಿದವರು. ಅವರ ಸಂಪುಟದಲ್ಲಿ ಸಚಿವೆಯಾಗಿ ಕೆಲಸ ಮಾಡುವ ಅವಕಾಶ ನನ್ನ ರಾಜಕೀಯ ಬದುಕಿನ ಅತ್ಯಂತ ಅಮೂಲ್ಯ ಅಧ್ಯಾಯವಾಗಿದೆ. ಅವರ ರಾಜಕೀಯ ದೂರದೃಷ್ಟಿ, ನಿರ್ಧಾರ ಸಾಮರ್ಥ್ಯ ಮತ್ತು ಜನರ ನೋವಿಗೆ ಸ್ಪಂದಿಸುವ ಮನಸ್ಸನ್ನು ಹತ್ತಿರದಿಂದ ಕಂಡು ಕಲಿಯುವ ಅವಕಾಶ ನನಗೆ ದೊರೆತದ್ದು ನನ್ನ ಸೌಭಾಗ್ಯ ಎಂದಿದ್ದಾರೆ.

ರಾಜಕೀಯದಲ್ಲಿ ಹುದ್ದೆ ಶಾಶ್ವತವಲ್ಲ
ರಾಜಕೀಯದಲ್ಲಿ ಅಧಿಕಾರ ಮತ್ತು ಹುದ್ದೆಗಳು ಶಾಶ್ವತವಲ್ಲ. ಆದರೆ ಜನರಿಗಾಗಿ ಬದುಕಿದ ನಾಯಕರ ಸೇವೆ, ಅವರ ಆದರ್ಶಗಳು ಮತ್ತು ಆಶೀರ್ವಾದಗಳು ಶಾಶ್ವತವಾಗಿರುತ್ತವೆ. ಸಿದ್ದರಾಮಯ್ಯನವರು ಅಧಿಕಾರದ ಕುರ್ಚಿಯಿಂದ ಎದ್ದಿರಬಹುದು; ಆದರೆ ಅವರು ಕಟ್ಟಿದ ಸಾಮಾಜಿಕ ನ್ಯಾಯದ ಚಳವಳಿ, ಬಡವರ ಪರದ ನಿಲುವು ಮತ್ತು ಜನಪರ ರಾಜಕಾರಣ ಎಂದೆಂದಿಗೂ ನಮ್ಮನ್ನು ಮುನ್ನಡೆಸುತ್ತಲೇ ಇರುತ್ತವೆ.

ಮುಂದಿನ ದಿನಗಳಲ್ಲಿಯೂ ಅವರ ಅನುಭವ, ಮಾರ್ಗದರ್ಶನ ಮತ್ತು ಆಶೀರ್ವಾದ ನಮಗೆ ಶಕ್ತಿಯಾಗಲಿ. ಕರ್ನಾಟಕದ ಅಭಿವೃದ್ಧಿ, ಸಮಾನತೆ ಮತ್ತು ಸೌಹಾರ್ದತೆಯ ಕನಸನ್ನು ಸಾಕಾರಗೊಳಿಸುವ ಅವರ ಹಾದಿಯಲ್ಲಿ ನಾವು ಎಲ್ಲರೂ ದೃಢವಾಗಿ ಸಾಗೋಣ.

ನಾಯಕತ್ವ ಎಂದರೆ ಕೇವಲ ಅಧಿಕಾರವಲ್ಲ; ಜನರ ಹೃದಯದಲ್ಲಿ ಅಚ್ಚಳಿಯದ ಗುರುತು ಮೂಡಿಸುವುದು. ಅಂತಹ ಅಪರೂಪದ ನಾಯಕನಿಗೆ ನನ್ನ ಹೃತ್ಪೂರ್ವಕ ಗೌರವ, ಕೃತಜ್ಞತೆ ಮತ್ತು ಪ್ರೀತಿ.
ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ನನ್ನ ನಮನಗಳು ಎಂದು ತಿಳಿಸಿದ್ದಾರೆ

ಹೆಚ್ಚಿನ ಸುದ್ದಿ