Monday, February 16, 2026
Homeಜಿಲ್ಲಾ ಸುದ್ದಿಗಳುಯಾದಗಿರಿ ಜಿಲ್ಲೆಯಾಗಿ ೧೭ ವರ್ಷ ಸಂದರೂ ಕಾಣದ 'ಜಿಲ್ಲಾ ಉತ್ಸವ': ಆಡಳಿತದ ನಿರ್ಲಕ್ಷ್ಯಕ್ಕೆ ಕರವೇ ಆಕ್ರೋಶ

ಯಾದಗಿರಿ ಜಿಲ್ಲೆಯಾಗಿ ೧೭ ವರ್ಷ ಸಂದರೂ ಕಾಣದ ‘ಜಿಲ್ಲಾ ಉತ್ಸವ’: ಆಡಳಿತದ ನಿರ್ಲಕ್ಷ್ಯಕ್ಕೆ ಕರವೇ ಆಕ್ರೋಶ

ಯಾದಗಿರಿ: ಜಿಲ್ಲೆಯಾಗಿ ೧೭ ವರ್ಷಗಳ ಸುದೀರ್ಘ ಅವಧಿ ಕಳೆದರೂ ಇದುವರೆಗೆ ‘ಯಾದಗಿರಿ ಜಿಲ್ಲಾ ಉತ್ಸವ’ ಆಯೋಜನೆಯಾಗದಿರುವುದು ಜಿಲ್ಲಾಡಳಿತ ಹಾಗೂ ಚುನಾಯಿತ ಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಸ್ವಾಭಿಮಾನಿ ಬಣ) ಜಿಲ್ಲಾಧ್ಯಕ್ಷರಾದ ಬಿರೇಶ ಚಿರತೆನೋರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಯಾದಗಿರಿಯ ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿಗೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದೆ. ಇಲ್ಲಿ ಗೀಗಿ ಪದ, ಡೊಳ್ಳಿನ ಪದ, ಶೋಭಾನ ಪದ, ಹಗಲು ವೇಷ ಸೇರಿದಂತೆ ನಾನಾ ರೀತಿಯ ಜಾನಪದ ಕಲೆಗಳು ಮತ್ತು ಸಾಹಿತ್ಯ ಶ್ರೀಮಂತವಾಗಿದೆ. ಇಷ್ಟೊಂದು ಸಾಂಸ್ಕೃತಿಕ ವೈವಿಧ್ಯತೆ ಇದ್ದರೂ ಇಲ್ಲಿನ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಡೆಯುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸರ್ಕಾರವು ಅದ್ದೂರಿಯಾಗಿ ಜಿಲ್ಲಾ ಉತ್ಸವಗಳನ್ನು ಆಯೋಜಿಸುತ್ತಿದೆ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯು ಈ ಬಗ್ಗೆ ಯಾವುದೇ ಆಸಕ್ತಿ ವಹಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ನಿರ್ಲಕ್ಷ್ಯದಿಂದಾಗಿ ಉತ್ಸವದ ಕನಸು ನೆನೆಗುದಿಗೆ ಬಿದ್ದಿದೆ. ಜಿಲ್ಲೆಯ ಜನರ ಅಪಾರ ನಿರೀಕ್ಷೆಗೆ ಈ ನಡೆ ನಿರಾಸೆ ಮೂಡಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಜಿಲ್ಲೆಯ ಸಾಂಸ್ಕೃತಿಕ ಅಸ್ಮಿತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಜಿಲ್ಲಾ ಉತ್ಸವಕ್ಕೆ ದಿನಾಂಕ ಘೋಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ

ಹೆಚ್ಚಿನ ಸುದ್ದಿ