ಬೆಂಗಳೂರು: ಜೆಪಿ ನಗರ ಸಮೀಪದ ಗೌರವ್ ನಗರದಲ್ಲಿರುವ ಬೆಸ್ಕಾಂ ಕಚೇರಿಯ ಎಇಇ ಮನೋಜ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ತಾತ್ಕಾಲಿಕವಾಗಿ ಮೀಟರ್ಗೆ 25 ಕಿಲೋವಾಟ್ ವಿದ್ಯುತ್ ಪೂರೈಕೆ ಮಾಡಲು ಲಂಚದ ಬೇಡಿಕೆ ಇಟ್ಟಿದ್ದ ಆರೋಪದಡಿ ಮನೋಜ್ ಕುಮಾರ್ ವಿರುದ್ಧ ದೂರು ದಾಖಲಾಗಿತ್ತು.
ಈ ಪ್ರಕರಣದಲ್ಲಿ ವಿದ್ಯುತ್ ಗುತ್ತಿಗೆದಾರ ಕಂಠರಾಜು ಕೂಡ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಎಇಇ ಮನೋಜ್, ಲಂಚದ ಹಣವನ್ನು ಕಂಠರಾಜು ಮೂಲಕ ಪಡೆಯಲು ಸೂಚಿಸಿದ್ದ ಎನ್ನಲಾಗಿದೆ.
ದೂರುದಾರ ರಘುರಾಜ್ ಅವರು ಇಂದು 50 ಸಾವಿರ ರೂಪಾಯಿ ಹಣವನ್ನು ಕಂಠರಾಜುಗೆ ನೀಡುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳ ವಿರುದ್ಧ ವಿಚಾರಣೆ ಮುಂದುವರಿದಿದೆ.
