ದೇವರ ಹಿಪ್ಪರಗಿ: ಸಮೀಪದ ಸುಕ್ಷೇತ್ರ ಬಿಂಜಲಭಾವಿ ಗ್ರಾಮದ ಆರಾಧ್ಯ ದೈವ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪುರಾಣ ಮಹಾಮಂಗಲೋತ್ಸವವು ಅತ್ಯಂತ ಸಡಗರ ಹಾಗೂ ಭಕ್ತಿಭಾವದಿಂದ ನೆರವೇರಿತು.
ಕಳೆದ 23 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಈ ಸಂಪ್ರದಾಯದಂತೆ ಈ ವರ್ಷವೂ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಶ್ರೀ ಬಸನಗೌಡ ಎಸ್. ಪಾಟೀಲ (ಯಡಿಯಾಪುರ) ಅವರು ಪಾಲ್ಗೊಂಡು, ದೈವಕ್ಕೆ ವಿಶೇಷ ಪೂಜೆ ಸಲ್ಲಿಸಿ ಗೌರವ ಸಮರ್ಪಣೆ ಸ್ವೀಕರಿಸಿದರು.
ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, “ಬಿಂಜಲಭಾವಿ ಗ್ರಾಮದಲ್ಲಿ ಇಂದು ಭಕ್ತಿಯ ಪರಾಕಾಷ್ಠೆ ಎದ್ದುಕಾಣುತ್ತಿದೆ. ಸತತ 23 ವರ್ಷಗಳಿಂದ ಈ ಪುಣ್ಯ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ವಿಷಯ. ಈ ಪುರಾಣ ಮಂಗಲೋತ್ಸವದ ಪುಣ್ಯ ಫಲವು ಗ್ರಾಮದ ಪ್ರತಿಯೊಬ್ಬ ರೈತ ಬಾಂಧವರಿಗೂ, ಮಹಿಳೆಯರಿಗೂ ಹಾಗೂ ಯುವಕರಿಗೂ ದೊರೆಯಲಿ. ನಾಡಿನಲ್ಲಿ ಸುಭಿಕ್ಷೆ ನೆಲೆಸಲಿ, ಕಾಲ ಕಾಲಕ್ಕೆ ಮಳೆಯಾಗಿ ರೈತರ ಬೆಳೆಗಳು ಸಮೃದ್ಧವಾಗಿ ಬರಲಿ ಎಂದು ಮಲ್ಲಿಕಾರ್ಜುನ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಧಾರ್ಮಿಕ ಮುಖಂಡರು ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡು ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕೃಪೆಗೆ ಪಾತ್ರರಾದರು
