ಬೆಂಗಗಳೂರು :: ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 1948ರಲ್ಲಿ ನಡೆದ ಜೀಪ್ ಹಗರಣವೇ ಕಾಂಗ್ರೆಸ್ನ ಭ್ರಷ್ಟಾಚಾರದ ಆರಂಭವಾಗಿದೆ ಎಂದು ಆರೋಪಿಸಿದರು. “ನೆಹರು ಅವರೇ ಭ್ರಷ್ಟಾಚಾರದ ಪಿತಾಮಹ. ಅಂದಿನಿಂದ ಇಂದಿನ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದವರೆಗೆ ಕಾಂಗ್ರೆಸ್ ಭ್ರಷ್ಟಾಚಾರದಲ್ಲೇ ತೊಡಗಿದೆ” ಎಂದು ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದ್ದ 187 ಕೋಟಿ ರೂಪಾಯಿ ಹಗರಣವನ್ನು ಉಲ್ಲೇಖಿಸಿದ ಶ್ರೀರಾಮುಲು, ಆಗಿನ ಸಚಿವ ಬಿ. ನಾಗೇಂದ್ರ ಜೈಲಿಗೆ ಹೋಗಿದ್ದರು ಮತ್ತು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲೇ ಹಗರಣ ನಡೆದಿರುವುದನ್ನು ಒಪ್ಪಿಕೊಂಡಿದ್ದರು ಎಂದು ಹೇಳಿದರು. ಆದರೆ ಈಗ ಅದೇ ಸರ್ಕಾರ ಹಗರಣವೇ ನಡೆದಿಲ್ಲ ಎಂದು ಹೇಳುತ್ತಿರುವುದು ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಎಂದು ಟೀಕಿಸಿದರು.
“ಕಾಂಗ್ರೆಸ್ ಯಾವಾಗಲೂ ತಪ್ಪು ಮಾಡಿ ದಲಿತರನ್ನೇ ಮುಂದಿಡುತ್ತದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜಗಜೀವನ್ ರಾಮ್ ಅವರನ್ನು ಬಳಸಿಕೊಂಡಿತು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸೋಲಿಸಿದ ಪಕ್ಷವೂ ಕಾಂಗ್ರೆಸ್ವೇ. ವಾಲ್ಮೀಕಿ ನಿಗಮದ ಹಣವನ್ನೂ ದಲಿತರ ಹೆಸರಿನಲ್ಲಿ ದುರುಪಯೋಗ ಮಾಡಲಾಗಿದೆ” ಎಂದು ಆರೋಪಿಸಿದರು.
ನಿಗಮದ ಹಣವನ್ನು ಸಾವಿರಾರು ಖಾತೆಗಳಿಗೆ ವರ್ಗಾಯಿಸಿ ಚುನಾವಣೆಗೆ ಬಳಸಲಾಗಿದೆ ಹಾಗೂ ಐಷಾರಾಮಿ ಕಾರು ಮತ್ತು ಚಿನ್ನ ಖರೀದಿಗೂ ಬಳಸಲಾಗಿದೆ ಎಂದು ಆರೋಪಿಸಿದ ಅವರು, “ಈ ಹಣ ರಾಹುಲ್ ಗಾಂಧಿ ಅವರ ದೆಹಲಿ ನಿವಾಸಕ್ಕೂ ತಲುಪಿದೆ” ಎಂದು ದೂರಿದರು.
“ಭ್ರಷ್ಟಾಚಾರಕ್ಕೆ ಜಾತಿ ಇಲ್ಲ. ಆದರೆ ಈಗ ಜಾತಿಯ ಹೆಸರಿನಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ಕೊಡಬೇಕಾದರೆ ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟು ಅದೇ ಸಮುದಾಯದ ಮತ್ತೊಬ್ಬರನ್ನು ಸಚಿವರನ್ನಾಗಿ ನೇಮಿಸಬೇಕು” ಎಂದು ಆಗ್ರಹಿಸಿದರು.
ನಾಗೇಂದ್ರ ಅವರು ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದ ಮೇಲೆ ಪ್ರಮಾಣ ಮಾಡಿ ತಾವು ಭ್ರಷ್ಟಾಚಾರ ಮಾಡಿಲ್ಲ ಎಂದು ಹೇಳಲಿ ಎಂದು ಸವಾಲು ಹಾಕಿದ ಶ್ರೀರಾಮುಲು, ಬಿಜೆಪಿ ಅವರ ರಾಜೀನಾಮೆಗಾಗಿ ಸದನದ ಒಳಗೂ ಹೊರಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಸ್.ಟಿ. ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಹಾಗೂ ಮಾಜಿ ಶಾಸಕ ಕೆ. ಶಿವನಗೌಡ ನಾಯಕ ಉಪಸ್ಥಿತರಿದ್ದರು.
