ಉಡುಪಿ: ಮುಂಡೂರು ಜಾರಿಗೆಕಟ್ಟೆಯ ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ್ ಪೂಜಾರಿ (60) ಅವರು ಫೆಬ್ರವರಿ 15ರಂದು ನಿಧನ ಹೊಂದಿದರು. ಕಾಸರಗೋಡಿನಲ್ಲಿ ದೈವದರ್ಶನಕ್ಕೆ ತೆರಳಿದ್ದ ವೇಳೆ ಹೃದಯಾಘಾತಕ್ಕೊಳಗಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಮೃತರು ಪತ್ನಿ, ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರವು ಕೊರಗಜ್ಜ, ಕೊರಗರ ಪಂಜುರ್ಲಿ ಸೇರಿದಂತೆ ವಿವಿಧ ಪರಿವಾರ ಶಕ್ತಿಗಳ ಆರಾಧನಾ ಕೇಂದ್ರವಾಗಿ ಪ್ರಸಿದ್ಧಿ ಪಡೆದಿದ್ದು, ವರ್ಷಪೂರ್ತಿ ಸಹಸ್ರಾರು ಭಕ್ತರು ಭೇಟಿ ನೀಡುತ್ತಾರೆ. ಕ್ಷೇತ್ರದಲ್ಲಿ ನಿರಂತರವಾಗಿ ಕೋಲ ಹಾಗೂ ಅಗೇಲು ಸೇವೆಗಳು ನಡೆಯುತ್ತಿದ್ದು, ವಿವಿಧ ಧರ್ಮಗಳ ಭಕ್ತರೂ ಹರಕೆಯ ಸೇವೆ ಸಲ್ಲಿಸುತ್ತಿದ್ದರು. ಇದರಿಂದಾಗಿ ಕ್ಷೇತ್ರವು ಕಾರಣಿಕ ಕ್ಷೇತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ದಿವಾಕರ್ ಪೂಜಾರಿ ಅವರು ಮುಂಡೂರು ಪೊಸಾಲು ಬ್ರಹ್ಮ ಶ್ರೀ ನಾರಾಯಣ ಗುರು ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು, ಸಂಘದ ನೂತನ ಕಟ್ಟಡ ನಿರ್ಮಾಣ ಕಾರ್ಯದಲ್ಲೂ ಪ್ರಮುಖ ಪಾತ್ರವಹಿಸಿದ್ದರು. ಅವರ ನಿಧನಕ್ಕೆ ಭಕ್ತರು ಮತ್ತು ಸಮಾಜದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

