ಚ ಕಿತ್ತೂರು : ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಗಿರುವ ‘ಕಿತ್ತೂರು ಚೆನ್ನಮ್ಮ ಉತ್ಸವ’ದಲ್ಲಿ ನಿಂತುಹೋಗಿರುವ ಕೃಷಿ ವಿಚಾರ ಸಂಕಿರಣವನ್ನು ಪುನಃ ಪ್ರಾರಂಭಿಸಬೇಕು ಮತ್ತು ರೈತರಿಗಾಗಿ ಪ್ರತ್ಯೇಕ ವೇದಿಕೆ ಹಾಗೂ ಕೃಷಿ ಮೇಳವನ್ನು ಆಯೋಜಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾಗಿರುವ ವೀರೇಶ್ವರ ಮಹಾಸ್ವಾಮಿಗಳು ಆಗ್ರಹಿಸಿದ್ದಾರೆ.
ಮಡಿವಾಳೇಶ್ವರ ಮಠ ದೇಗುಲಹಳ್ಳಿ ಹಾಗು ಅಂಬಡಗಟ್ಟಿಯ ಪೀಠಾಧಿಪತಿಗಳೂ ಆಗಿರುವ ವೀರೇಶ್ವರ ಮಹಾಸ್ವಾಮಿಗಳು,ಕಿತ್ತೂರಿನ ತಹಸೀಲ್ದಾರರಿಗೆ ಮನವಿ ಅರ್ಪಿಸುವ ಮೂಲಕ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಕಿತ್ತೂರು ಭಾಗವು ಮೂಲತಃ ಕೃಷಿ ಪ್ರಧಾನ ಪ್ರದೇಶವಾಗಿದ್ದು, ಈ ಹಿಂದೆ ಉತ್ಸವದಲ್ಲಿ ನಡೆಯುತ್ತಿದ್ದ ಕೃಷಿ ವಿಚಾರ ಸಂಕಿರಣವು ಸ್ಥಳೀಯ ರೈತರಿಗೆ ಅತ್ಯಂತ ಉಪಯುಕ್ತವಾಗಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ಕೈಬಿಟ್ಟಿರುವುದರಿಂದ ರೈತರು ಆಧುನಿಕ ಕೃಷಿ ತಂತ್ರಜ್ಞಾನ ಮತ್ತು ಮಾಹಿತಿಯಿಂದ ವಂಚಿತರಾಗುತ್ತಿದ್ದಾರೆ ಎಂದು ಶ್ರೀಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಬೇಡಿಕೆಗಳು:
1)ಕೃಷಿಗಾಗಿಯೇ ಪ್ರತ್ಯೇಕ ವೇದಿಕೆ: ಉತ್ಸವದ ಮೂರು ಉಪ-ವೇದಿಕೆಗಳ ಪೈಕಿ ಒಂದರಲ್ಲಿ ಪೂರ್ತಿ ಒಂದು ದಿನವನ್ನು ಕೃಷಿ ಕಾರ್ಯಕ್ರಮಗಳಿಗೆ ಮೀಸಲಿಡಬೇಕು ಮತ್ತು ಇದರಲ್ಲಿ ಸ್ಥಳೀಯ ರೈತ ಸಂಘಟನೆಗಳಿಗೆ ಭಾಗವಹಿಸಲು ಅವಕಾಶ ನೀಡಬೇಕು.
2)ತಜ್ಞರಿಂದ ಉಪನ್ಯಾಸ: ಕೃಷಿ ವೇದಿಕೆಯಲ್ಲಿ ಕೃಷಿ ವಿಚಾರ ಸಂಕಿರಣ ಏರ್ಪಡಿಸಿ ವಿಜ್ಞಾನಿಗಳು ಹಾಗೂ ಯಶಸ್ವಿ ರೈತರಿಂದ ನವೀನ ಕೃಷಿ ಪದ್ಧತಿ, ಹವಾಮಾನ ವೈಪರೀತ್ಯ ಎದುರಿಸುವ ವಿಧಾನ ಹಾಗೂ ಸಾವಯವ ಕೃಷಿ ಕುರಿತು ಉಪನ್ಯಾಸಗಳು,ರೈತ – ತಜ್ಞರ ನೇರ ಸಂವಾದಗಳನ್ನು ಹಮ್ಮಿಕೊಳ್ಳಬೇಕು.
3) ‘ಕೃಷಿ ಮೇಳ ಹಾಗೂ ವಸ್ತುಪ್ರದರ್ಶನ’ ಎಂದು ಪುನರ್ನಾಮಕರಣ: ಉತ್ಸವದಲ್ಲಿ ಹಾಕಲಾಗುವ ವಸ್ತುಪ್ರದರ್ಶನವನ್ನು ‘ಕೃಷಿ ಮೇಳ ಹಾಗೂ ವಸ್ತು ಪ್ರದರ್ಶನ’ ಎಂದು ಮರುನಾಮಕರಣ ಮಾಡುವ ಮೂಲಕ ಕೃಷಿಕರಿಗೆ ಸೂಕ್ತ ಗೌರವ ನೀಡಬೇಕು.
4)ಸರ್ಕಾರಿ ಯೋಜನೆಗಳ ಅರಿವು: ಬೆಳೆ ವಿಮೆ, ಸರ್ಕಾರಿ ಸೌಲಭ್ಯಗಳು ಹಾಗೂ ಮಾರುಕಟ್ಟೆ ಅವಕಾಶಗಳ ಕುರಿತು ರೈತರಿಗೆ ಸಮಗ್ರ ಮಾಹಿತಿ ನೀಡುವ ಗೋಷ್ಠಿಗಳನ್ನು ಆಯೋಜಿಸಬೇಕು.
5)ಪ್ರಗತಿಪರ ಕೃಷಿಕರಿಗೆ ಸನ್ಮಾನ: ಯುವ ಜನಾಂಗಕ್ಕೆ ಕೃಷಿಯತ್ತ ಆಸಕ್ತಿ ಮೂಡಿಸಲು ಮತ್ತು ಕೃಷಿ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಈ ಬಾರಿಯಿಂದ ಹಿರಿಯ ಹಾಗೂ ಪ್ರಗತಿಪರ ಕೃಷಿಕರನ್ನು ಗುರುತಿಸಿ ಸನ್ಮಾನಿಸುವ ಪರಂಪರೆ ಪ್ರಾರಂಭಿಸಬೇಕು.
ಇಂದಿನ ದಿನಗಳಲ್ಲಿ ಯುವ ಜನಾಂಗ ಕೃಷಿಯಿಂದ ದೂರ ಸರಿಯುತ್ತಿದ್ದು, ಕೃಷಿಯಿಲ್ಲದೇ ಮಾನವಕುಲದ ಬದುಕು ಅಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕಿದೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಕಿತ್ತೂರು ಉತ್ಸವ ಸಮಿತಿಯು ರೈತರ ಹಿತದೃಷ್ಟಿಯಿಂದ ಈ ಎಲ್ಲಾ ಆಶಯಗಳಿಗೆ ಸ್ಪಂದಿಸಿ, ಸೂಕ್ತ ಅನುಮತಿ ನೀಡಬೇಕೆಂದು ಶ್ರೀಗಳು ಮನವಿಯಲ್ಲಿ ವಿನಂತಿಸಿದ್ದಾರೆ.
