ಅಥಣಿ:ಪಟ್ಟಣದ ವಾರ್ಡ್ ನಂಬರ್ 1 ನಲ್ಲಿ ಪುರಸಭೆ ಸದಸ್ಯೆ ಬಿಬಿಜಾನ್ ತಾಂಬೋಳಿ ಅವರ ನಿರ್ದೇಶನದಂತೆ ಹಾಗೂ ಅವರ ಪುತ್ರ ಆಸಿಫ್ ತಾಂಬೋಳಿ ಅವರ ನೇತೃತ್ವದಲ್ಲಿ ಪುರಸಭೇ ವತಿಯಿಂದ ಬೃಹತ್ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಪುರಸಭೆ ಸಿಬ್ಬಂದಿಗಳ ಸಹಕಾರದೊಂದಿಗೆ ವಾರ್ಡಿನ ಎಲ್ಲಾ ಗಲ್ಲಿಗಳಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಲಾಯಿತು. ಚರಂಡಿ ತುಂಬಿ ಹರಿಯುತ್ತಿದ್ದರಿಂದ ನಿವಾಸಿಗಳು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದರು. ಈಗ ಚರಂಡಿಗಳನ್ನು ಸಂಪೂರ್ಣ ತೆರವುಗೊಳಿಸಿದ್ದರಿಂದ ನಿವಾಸಿಗಳಿಗೆ ಬಹುದೊಡ್ಡ ಮುಕ್ತಿ ಸಿಕ್ಕಂತಾಗಿದೆ.
ವಾರ್ಡಿನಲ್ಲಿದ್ದ ಒಟ್ಟು 4 ಕಸದ ತಿಪ್ಪೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ, ವಾರ್ಡ್ ಅನ್ನು ತಿಪ್ಪೆ ಮುಕ್ತ ವಾರ್ಡ್ ಆಗಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಆಸಿಫ್ ತಾಂಬೋಳಿ ಅವರು, “ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದ ಪುರಸಭೆಯ ಎಲ್ಲ ಸದಸ್ಯರಿಗೆ, ಅಧ್ಯಕ್ಷರಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇಂದು ನಮ್ಮ ವಾರ್ಡ್ ಸಂಪೂರ್ಣವಾಗಿ ಸ್ವಚ್ಛವಾಗಿ, ತಿಪ್ಪೆ ಮುಕ್ತವಾಗಿದೆ ಎನ್ನುವುದು ಹೆಮ್ಮೆಯ ವಿಷಯ. ವಾರ್ಡಿನ ಎಲ್ಲ ನಾಗರಿಕರು ಸಹಕರಿಸಬೇಕು. ಯಾರೂ ಸಾರ್ವಜನಿಕ ಸ್ಥಳದಲ್ಲಿ ಕಸ ತಂದು ಹಾಕಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿ ಕಸ ಹಾಕಿದರೆ, ಪುರಸಭೆ ವತಿಯಿಂದ 500 ರೂ. ದಂಡ ವಿಧಿಸಲಾಗುವುದು. ಎಲ್ಲರೂ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ, ಮನೆ ಬಾಗಿಲಿಗೆ ಬರುವ ಕಸದ ವಾಹನದಲ್ಲಿಯೇ ಹಾಕಿ ಸ್ವಚ್ಛತೆ ಕಾಪಾಡಬೇಕು” ಎಂದು ಮನವಿ ಮಾಡಿದರು.
ಈ ವೇಳೆ ಪುರಸಭೆ ಸದಸ್ಯರು, ಪುರಸಭೆ ಸಿಬ್ಬಂದಿ ವರ್ಗ ಮತ್ತು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
ವರದಿ:ಯಾಸಿನ ಝಾರೆ, ಅಥಣಿ
