Sunday, August 16, 2026
HomeUncategorizedಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ದೀಕರಣ ಸಂವಿಧಾನದ ಆತ್ಮಕ್ಕೆ ಮಾಡಿದ ಘೋರ...

ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ದೀಕರಣ ಸಂವಿಧಾನದ ಆತ್ಮಕ್ಕೆ ಮಾಡಿದ ಘೋರ ಅಪಮಾನ : ಡಾ. ಆನಂದ ಕುಮಾರ್


ಬೆಂಗಳೂರು,ಆ.14: ದೇಶ ಅಮೃತ ಕಾಲದಲ್ಲಿ ಮತ್ತೊಂದು ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ರಾಜ್ಯ ಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಮಾತನಾಡಿದ ಜಾಗದಲ್ಲಿ ‘ಶುದ್ಧೀಕರಣ ಯಾಗ’ ನಡೆಸಿರುವ ಘಟನೆ ಧಿಘ್ಭ್ರಮೆ ಮೂಡಿಸಿದೆ ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.
ದೇಶದ ಮೇಲ್ಮನೆಯ ಪ್ರತಿಪಕ್ಷ ನಾಯಕ ಭಾಷಣ ಮಾಡಿದ ವೇದಿಕೆಯನ್ನು ‘ಶುದ್ಧೀಕರಿಸುವ’ ಅಗತ್ಯವಿದೆ ಎಂಬ ಮನಸ್ಥಿತಿಯೇ ಆತಂಕಕಾರಿ. ಇದು ಜೀವ ವಿರೋಧಿ ಧೋರಣೆ. ಯಾವುದೇ ವ್ಯಕ್ತಿಯ ಜಾತಿ, ಜನ್ಮ, ಧರ್ಮ ಅಥವಾ ಸಾಮಾಜಿಕ ಸ್ಥಾನವನ್ನು ‘ಅಶುದ್ಧತೆ’ಯ ಮಾನದಂಡವನ್ನಾಗಿ ಮಾಡುವುದು ಸಂವಿಧಾನದ ಮೂಲ ಆತ್ಮಕ್ಕೆ ಮಾಡಿದ ಘೋರ ಅಪಮಾನ. ಹಲ್ದ್ವಾನಿಯ ಘಟನೆ ವೈಯಕ್ತಿಕವಲ್ಲ. ಸಮಸ್ತ ಶೋಷಿತ ವರ್ಗಗಳಿಗೆ ಎಸಗಿದ ಬಹುದೊಡ್ಡ ಪ್ರಮಾದ ಎಂದಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜಾತಿಯ ಕಣ್ಣಿನಿಂದ ನೋಡುವ ಮನಸ್ಸನ್ನು ಮೊದಲು ಶುದ್ದೀಕರಿಸಬೇಕಾಗಿದೆ. ಜಾತಿ ತಾರತಮ್ಯದ ಗಟ್ಟಿಯಾದ ಮನಸ್ಸನ್ನು ಯಾವ ನೀರು ಶುದ್ದೀಕರಿಸಲಾರದು. ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ, ಮಾನವ ಘನತೆಗೆ ವಿರುದ್ಧವಾದ ಧೋರಣೆ ಇದ಻ಗಿದೆ. ಅನ್ಯ ಪಕ್ಷದವರ ಮೇಲಿನ ಆರೋಪಕ್ಕೆ ತನಿಖೆ ಬೇಕೆನ್ನುವುದು, ತನ್ನ ಪಕ್ಷದವರ ಮೇಲಿನ ಆರೋಪಗಳಿಗೆ ಮೌನವಾಗುವುದು ಇದು ಮಾನವಪರ, ಸಂವಿಧಾನಪರ ರಾಜಕೀಯವಲ್ಲ. ಒಬ್ಬ ದಲಿತ ವ್ಯಕ್ತಿ ದೇಶದ ಅತ್ಯುನ್ನತ ರಾಜಕೀಯ ವೇದಿಕೆಗಳಲ್ಲಿ ನಿಂತು ಮಾತನಾಡಲು ಸಂವಿಧಾನ ಅವಕಾಶ ಕೊಟ್ಟಿದೆ. ಅವರ ಮಾತು ಒಪ್ಪಿಗೆಯಾಗಲಿ, ವಿರೋಧವಾಗಲಿ—ಅವನ ಘನತೆ ಪ್ರಶ್ನಾತೀತವಾಗಿರುತ್ತದೆ ಎಂಬುದನ್ನು ಮರೆಯಬಾರದು.
ನಾವು ಯಾವ ಭಾರತವನ್ನು ನಿರ್ಮಿಸುತ್ತಿದ್ದೇವೆ? ಸಂವಿಧಾನ ಮನುಷ್ಯನನ್ನು ಜಾತಿಯಿಂದ ಅಳೆಯಬೇಡಿ ಎಂದು ಹೇಳಿದೆ. ಸಾರ್ವಜನಿಕ ಸ್ಥಳವನ್ನು ಯಾರೊಬ್ಬರ ಜನ್ಮದಿಂದ ಪವಿತ್ರ ಅಥವಾ ಅಪವಿತ್ರವೆಂದು ನಿರ್ಧರಿಸಬಾರದು. ಆದರೆ ಸಮಾನತೆ ಕೇವಲ ಭಾಷಣದಲ್ಲಿದೆ. ಇದನ್ನು ಬದುಕಿನಲ್ಲಿ ಆಚರಿಸಬೇಕು. ಯಾರೊಬ್ಬರ ಜಾತಿಯೂ ಅಶುದ್ಧವಲ್ಲ. ಜಾತಿಯ ಆಧಾರದ ಮೇಲೆ ಮನುಷ್ಯನ ಘನತೆಯನ್ನು ತಿರಸ್ಕರಿಸುವ ಮನೋಭಾವವನ್ನು ಶುದ್ಧೀಕರಿಸುವ ಹೊಣೆಗಾರಿಕೆ ನಮ್ಮೆಲ್ಲರದು. ಸಂವಿಧಾನಾತ್ಮಕ ಹುದ್ದೆಯಲ್ಲಿರುವ ವ್ಯಕ್ತಿ ಭಾಗವಹಿಸಿದ ಸ್ಥಳವನ್ನು ‘ಶುದ್ಧೀಕರಣ’ ಮಾಡಲಾಗಿದೆ ಎಂಬ ವರದಿ ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅವಮಾನವಲ್ಲ. ಆತ್ಮಗೌರವಕ್ಕೆ ಧಕ್ಕೆ ತರುವ ಮನೋಭಾವದ ಪ್ರತೀಕವಾಗಿದೆ” ಎಂದು ಡಾ. ಆನಂದ ಕುಮಾರ್ ಹೇಳಿದ್ದಾರೆ.
ಸಂವಿಧಾನ ಪ್ರತಿಯೊಬ್ಬರಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ಘನತೆಯ ಹಕ್ಕನ್ನು ನೀಡಿದೆ. ಜಾತಿಯ ಆಧಾರದ ಮೇಲೆ ಯಾರನ್ನಾದರೂ ಮೇಲಿನವರು–ಕೆಳಗಿನವರು ಎಂದು ಪರಿಗಣಿಸುವುದು ಅಥವಾ ಅಸ್ಪೃಶ್ಯತೆಯ ಮನೋಭಾವವನ್ನು ಪ್ರದರ್ಶಿಸುವುದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ. ಇದನ್ನು ಖಂಡಿಸಿ ಎಐಸಿಸಿ ಪರಿಶಿಷ್ಟ ಮತ್ತು ಒಬಿಸಿ ವಿಭಾಗಗಳು ದೇಶಾದ್ಯಂತ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳು ಹಾಗೂ ಸ್ಮಾರಕಗಳ ಮುಂದೆ ಶಾಂತಿಯುತ ಪ್ರತಿಭಟನೆಗಳನ್ನು ಆಯೋಜಿಸುತ್ತಿದ್ದು, ಇಂತಹ ಮನಸ್ಥಿತಿಯುಳ್ಳ ವ್ಯಕ್ತಿಗಳ ವಿರುದ್ಧ ಉಗ್ರ ಹೋರಾಟ ನಡೆಸುತ್ತೇವೆ ಎಂದು ಡಾ. ಆನಂದ ಕುಮಾರ್ ಹೇಳಿದ್ದಾರೆ.
ಇದು ಯಾವುದೇ ಜಾತಿ ಅಥವಾ ಸಮುದಾಯದ ವಿರುದ್ಧದ ಹೋರಾಟವಲ್ಲ. ಇದು ಜಾತಿ ತಾರತಮ್ಯದ ಮನೋಭಾವದ ವಿರುದ್ಧದ ಸಂಗ್ರಾಮ. ಸಂವಿಧಾನದಲ್ಲಿ ನಂಬಿಕೆ ಇರುವ ಪ್ರತಿಯೊಬ್ಬ ಭಾರತೀಯನೂ ಈ ಹೋರಾಟದ ಭಾಗವಾಗಬೇಕು. ಅಂಬೇಡ್ಕರ್ ನಮಗೆ ಕೇವಲ ಸಂವಿಧಾನ ನೀಡಲಿಲ್ಲ; ಅವರು ಸಮಾನತೆ, ಸ್ವಾಭಿಮಾನ, ಸಾಮಾಜಿಕ ನ್ಯಾಯ ಮತ್ತು ಮಾನವ ಘನತೆಯ ದೃಷ್ಟಿಕೋನವನ್ನು ನೀಡಿದ್ದಾರೆ. ಭಾರತದ ಪ್ರಜಾಪ್ರಭುತ್ವದ ಶಕ್ತಿ ಅದರ ವೈವಿಧ್ಯತೆ ಮತ್ತು ಸಮಾನತೆಯಲ್ಲಿ ಇದೆ. ಯಾವುದೇ ವ್ಯಕ್ತಿಯ ಜಾತಿ, ಧರ್ಮ ಅಥವಾ ಸಾಮಾಜಿಕ ಹಿನ್ನೆಲೆಯ ಆಧಾರದ ಮೇಲೆ ಅವಮಾನಿಸುವ ಮನೋಭಾವ ಖಂಡನೀಯ ಎಂದು ಹೇಳಿದ್ದಾರೆ

ಹೆಚ್ಚಿನ ಸುದ್ದಿ