ದೇವದುರ್ಗ: ತೀವ್ರ ಕುತೂಹಲ ಮತ್ತು ಸುದೀರ್ಘ ಚರ್ಚೆಗಳ ನಂತರ, ಕೊನೆಗೂ ದೇವದುರ್ಗ ತಾಲೂಕಿನ ಜನತಾದಳ (ಜಾತ್ಯತೀತ) ಪಕ್ಷದ ನೂತನ ತಾಲೂಕು ಅಧ್ಯಕ್ಷರಾಗಿ ಹಿರಿಯ ವಕೀಲರಾದ ಶ್ರೀ ಬಸನಗೌಡ ದೇಸಾಯಿ ಅವರನ್ನು ಅಧಿಕೃತವಾಗಿ ನೇಮಕ ಮಾಡಲಾಗಿದೆ.
ಪಕ್ಷದ ವರಿಷ್ಠರು ಹಳೇ ಮುಖಂಡರ ಅಭಿಪ್ರಾಯ ಹಾಗೂ ತಾಲೂಕಿನ ರಾಜಕೀಯ ಸಮೀಕರಣಗಳನ್ನು ತೂಗಿ ನೋಡಿ ಅಂತಿಮವಾಗಿ ಶ್ರೀ ಬಸನಗೌಡ ದೇಸಾಯಿ ಅವರ ಹೆಗಲಿಗೆ ಈ ಜವಾಬ್ದಾರಿಯನ್ನು ಹೊರಿಸಿದ್ದಾರೆ.
ಪಕ್ಷದ ಧ್ವಜ ಹಸ್ತಾಂತರಿಸಿ ಶುಭ ಹಾರೈಕೆ
ಇತ್ತೀಚೆಗೆ ನಡೆದ ಅಧಿಕೃತ ಪದಗ್ರಹಣ ಸಮಾರಂಭದಲ್ಲಿ ಪಕ್ಷದ ಪ್ರಮುಖ ನಾಯಕರು ಮತ್ತು ಶಾಸಕರು ನೂತನ ಅಧ್ಯಕ್ಷರಾದ ಬಸನಗೌಡ ದೇಸಾಯಿ ಅವರಿಗೆ ಜೆಡಿಎಸ್ ಪಕ್ಷದ ಅಧಿಕೃತ ಧ್ವಜವನ್ನು ಹಸ್ತಾಂತರಿಸುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು
ಈ ಸಂದರ್ಭದಲ್ಲಿ ಜೆಡಿಎಸ್ ಪ್ರಮುಖ ಮುಖಂಡರಾದ ಶ್ರೀಮತಿ ಕರೆಮ್ಮ ಜಿ. ನಾಯಕ್ ಸೇರಿದಂತೆ ತಾಲೂಕಿನ ಹಾಗೂ ಜಿಲ್ಲೆಯ ಹಿರಿಯ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದು ನೂತನ ಅಧ್ಯಕ್ಷರನ್ನು ಆತ್ಮೀಯವಾಗಿ ಅಭಿನಂದಿಸಿದರು.
ನೂತನ ಅಧ್ಯಕ್ಷರ ನಡೆ:
”ಪಕ್ಷದ ವರಿಷ್ಠರು ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ತಾಲೂಕಿನಲ್ಲಿ ಹಳೇ ಮತ್ತು ಹೊಸ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು, ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ,” ಎಂದು ನೂತನ ಅಧ್ಯಕ್ಷ ಬಸನಗೌಡ ದೇಸಾಯಿ ವಕೀಲರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಶ್ರೀ ಬಸನಗೌಡ ದೇಸಾಯಿ ಅವರ ನೇಮಕಾತಿಯಿಂದ ದೇವದುರ್ಗ ತಾಲೂಕಿನ ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿದ್ದು, ಮುಂಬರುವ ಸ್ಥಳೀಯ ತಾಲೂಕು ಜಿಲ್ಲಾ ಪಂಚಾಯತ್ ಚುನಾವಣೆಗೆ ಹಾಗೂ ಪಕ್ಷದ ಸಂಘಟನೆಗೆ ಹೊಸ ಶಕ್ತಿ ಬಂದಂತಾಗಿದೆ ಎಂದು ಸ್ಥಳೀಯ ನಾಯಕರು ಹರ್ಷ ವ್ಯಕ್ತಪಡಿಸಿದ್ದಾರೆ.
