ಚನ್ನಮ್ಮನ ಕಿತ್ತೂರು: ಆನ್ಲೈನ್ ಔಷಧಿ ವ್ಯಾಪಾರ ವ್ಯವಸ್ಥೆಯನ್ನು ವಿರೋಧಿಸಿ ಇಂದು (ಮೇ 20) ದೇಶಾದ್ಯಂತ ಔಷಧಿ ವ್ಯಾಪಾರಸ್ಥರ ಒಕ್ಕೂಟವು ಒಂದು ದಿನದ ಮಟ್ಟಿಗೆ ಔಷಧಿ ವ್ಯಾಪಾರ ಮಳಿಗೆಗಳನ್ನು ಬಂದ್ ಮಾಡಲು ಕರೆ ನೀಡಿದೆ. ಆದರೆ, ಇಡೀ ದೇಶವೇ ಒಗ್ಗಟ್ಟಿನಿಂದ ಪ್ರತಿಭಟಿಸುತ್ತಿರುವ ಈ ಸಂದರ್ಭದಲ್ಲಿ, ಬೆಳಗಾವಿ ಜಿಲ್ಲಾ ಔಷಧಿ ವ್ಯಾಪಾರಸ್ಥರ ಒಕ್ಕೂಟಗಳು ಮಾತ್ರ ಇದಕ್ಕೆ ಯಾವುದೇ ಬೆಂಬಲ ಸೂಚಿಸದೆ ಎಂದಿನಂತೆ ವ್ಯಾಪಾರ ನಡೆಸುತ್ತಿರುವುದು ತೀವ್ರ ಸಂಶಯಕ್ಕೆ ಕಾರಣವಾಗಿದೆ ಮತ್ತು ಇದೊಂದು ದೊಡ್ಡ ವಿಪರ್ಯಾಸದ ಸಂಗತಿ ಎಂದು ಕಿತ್ತೂರು ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಜಗದೀಶ ಬಿಕ್ಕಣ್ಣವರ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದ ಲಕ್ಷಾಂತರ ಸಾಂಪ್ರದಾಯಿಕ ಔಷಧಿ ವ್ಯಾಪಾರಸ್ಥರ ಹಿತರಕ್ಷಣೆಗಾಗಿ ಮತ್ತು ಆನ್ಲೈನ್ ದಂಧೆಯ ವಿರುದ್ಧ ರಾಷ್ಟ್ರಮಟ್ಟದಲ್ಲಿ ಇಂತಹ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಇಂತಹ ನಿರ್ಣಾಯಕ ಹೋರಾಟದ ಸಮಯದಲ್ಲಿ ಜಿಲ್ಲಾ ಒಕ್ಕೂಟವು ಜವಾಬ್ದಾರಿಯಿಂದ ಹಿಂದೆ ಸರಿದಿರುವುದು ಮತ್ತು ಪ್ರತಿಭಟನೆಯಿಂದ ದೂರ ಉಳಿದಿರುವುದು ತಳಮಟ್ಟದ ವ್ಯಾಪಾರಿಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
”ಇಡೀ ದೇಶದ ಔಷಧಿ ವ್ಯಾಪಾರಸ್ಥರು ಒಟ್ಟಾಗಿ ಧ್ವನಿ ಎತ್ತುತ್ತಿರುವಾಗ, ಬೆಳಗಾವಿ ಜಿಲ್ಲಾ ಒಕ್ಕೂಟದ ಈ ನಿಲುವು ಹೋರಾಟದ ಒಗ್ಗಟ್ಟಿಗೆ ಧಕ್ಕೆ ತರುವಂತಿದೆ. ಇವರ ಈ ಅಸಹಕಾರದ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.”
ಜಗದೀಶ ಬಿಕ್ಕಣ್ಣವರ, ಅಧ್ಯಕ್ಷರು, ಕಿತ್ತೂರು ತಾಲೂಕು ಔಷಧಿ ವ್ಯಾಪಾರಸ್ಥರ ಸಂಘ ಇವರು ವ್ಯಾಪಾರಿಗಳ ಹಿತದೃಷ್ಟಿಯಿಂದ ಹಾಗೂ ಭವಿಷ್ಯದ ವೃತ್ತಿಪರ ಭದ್ರತೆಗಾಗಿ ಎಲ್ಲರೂ ಒಟ್ಟಾಗಿ ಹೋರಾಡಬೇಕಾದ ಅಗತ್ಯವನ್ನು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದ್ದಾರೆ.
