ಬಾಗಲಕೋಟೆ:
ಹೊಸ ಕಾರು ಸಹಿತ ವ್ಯಕ್ತಿಯೋರ್ವನನ್ನು ಆತನ ಸಹೋದರನೇ ಕೊಲೆ ಮಾಡಿದ್ದ ಘಟನೆ ಮಾಸುವ ಮುನ್ನವೇ ಜಮಖಂಡಿ ತಾಲೂಕಿನ ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೆರಡು ಕೊಲೆ ಪ್ರಕರಣಗಳು ವರದಿಯಾಗಿವೆ.
ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ತೊದಲಭಾಗಿಯಲ್ಲಿ ಪತ್ನಿಯ ಶೀಲ ಶಂಕಿಸಿ ಪತಿಯೇ ಕೊಲೆ ಮಾಡಿದ ಘಟನೆ ನಡೆದಿದೆ. ಸೌಮ್ಯ(೩೨) ಮೃತ ದುರ್ದೈವಿ. ಆಕೆಯ ಪತಿ ಮಲ್ಲಪ್ಪ ಆಕೆಯನ್ನು ಕೊಂದಿದ್ದಾನೆ.
೧೦ ವರ್ಷಗಳ ಹಿಂದೆ ಸೌಮ್ಯಳನ್ನು ವರಸಿರುವ ಮಲ್ಲಪ್ಪನಿಗೆ ೯ ವರ್ಷದ ಮಗ ಹಾಗೂ ೭ ವರ್ಷದ ಮಗಳು ಇದ್ದಾಳೆ.
ಸೌಮ್ಯ ತನ್ನ ಮನೆಯ ಪಕ್ಕದಲ್ಲಿರುವ ಜಕಣವ್ವ ಎಂಬಾಕೆಯ ಜತೆಗೆ ಕೂಲಿ ಕೆಲಸಕ್ಕೆ ಹೋಗುತ್ತಾಳೆ. ಜಕಣವ್ವಳ ಪತಿ ಇಲ್ಲದಾಗ ಆಕೆಯ ಜತೆಗೆ ಇರಲು ಸೌಮ್ಯ ತೆರಳಿದ್ದು, ಆಕೆ ಬಗ್ಗೆ ಅನುಮಾನಗೊಂಡಿರುವ ಮಲ್ಲಪ್ಪ ಆಕೆಯ ಮನೆಗೆ ತೆರಳಿದ್ದಾನೆ. ಆಗ ಪ್ರವೀಣ ಎಂಬಾತ ಅಲ್ಲಿರುವುದನ್ನು ಕಂಡು ಮಲ್ಲಪ್ಪ ಸೌಮ್ಯಳ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಮೊದಲೇ ಹೃದಯ ಶಸ್ತçಚಿಕಿತ್ಸೆಗೆ ಒಳಪಟ್ಟಿದ್ದ ಸೌಮ್ಯಗೆ ಆರೋಗ್ಯ ಸಂಬAಧಿ ಸಮಸ್ಯೆಗಳಿದ್ದವು. ಮಲ್ಲಪ್ಪ ಹಲ್ಲೆ ನಡೆಸುತ್ತಿದ್ದಂತೆ ಆಕೆ ಕುಸಿದು ಬಿದ್ದಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆಯಾದರೂ ಅಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು ಎಂದು ತಿಳಿದು ಬಂದಿದೆ.
ಘಟನೆ ಸಂಭವಿಸಿದ ಸಂದರ್ಭದಲ್ಲಿ ಮಲ್ಲಪ್ಪನ ಜತೆಗೆ ಆತನ ಇಬ್ಬರು ಸಹಚರರು ಇದ್ದರು ಎಂದು ತಿಳಿದು ಬಂದಿದ್ದು, ಅವರು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಲ್ಲಪ್ಪನನ್ನು ವಶಕ್ಕೆ ಪಡೆದಿದ್ದಾರೆ.
ಮನೆ ಮುಂದೆ ಮಲಗಿ ಹೆಣವಾದ:
ಸಾವಳಗಿ ಪೊಲೀಸ್ ಠಾಣೆ ವ್ಯಾಪ್ತಿಯ ತುಂಗಾರ ಗ್ರಾಮದಲ್ಲಿ ಅಶೋಕ ತಳವಾಡ ಅಲಿಯಾಸ್ ಕೋಹ್ಲಿ ಎಂಬಾತನನ್ನು ಹತ್ಯೆ ಮಾಡಲಾಗಿದೆ. ಅಶೋಕ ಮನೆ ಎದುರು ತನ್ನ ಸ್ನೇಹಿತ ಉತ್ತಮ ಎಂಬಾತನ ಜತೆಗೆ ಮಲಗಿದಾಗ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈಯ್ಯಲಾಗಿದೆ. ಉತ್ತಮಗೂ ಗಾಯಗಳಾಗಿದ್ದು, ವಿಜಯಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಶೋಳವಾಡ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಎಸ್ಪಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.
ಈಚೆಗೆ ಹೊಸ ಕಾರು ಖರೀದಿಸಿ ಬರುತ್ತಿದ್ದ ಸೋಮಲಿಂಗಪ್ಪ ಪಡಸಲಗಿ ಎಂಬಾತನನ್ನು ಆತನ ಊರು ಕನೋಳಿ ಬಳಿ ಆತನ ಸಹೋದರ ಸದಾಶಿವ ಹಾಗೂ ಐವರು ಸಹಚರರು ಹತ್ಯೆಗೈದ ಬಳಿಕ ಹೊಸ ಕಾರು ಸಹಿತ ಸೋಮಲಿಂಗಪ್ಪನ ಶವವನ್ನು ಸುಟ್ಟು ಹಾಕಿದ್ದರು. ಈ ಘಟನೆ ಜಿಲ್ಲೆಯನ್ನು ಬೆಚ್ಚಿಬೀಳಿಸಿತ್ತು. ಆ ಘಟನೆ ಮಾಸುವ ಮುನ್ನ ಮತ್ತೆರಡು ಕೊಲೆಗಳು ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
