ಲಿಂಗಸೂಗೂರು: ತಾಲ್ಲೂಕಿನ ಪ್ರಸಿದ್ಧ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಗುರುವಾರ ಬೆಳಗಿನ ಜಾವ ಭೀಕರ ತಾಂತ್ರಿಕ ಅವಘಡವೊಂದು ಸಂಭವಿಸಿದ್ದು, ನೆಲದ ಆಳಕ್ಕೆ ಇಳಿಯುತ್ತಿದ್ದ ಕಾರ್ಮಿಕರು ಲಿಫ್ಟ್ನಲ್ಲಿ ಸಿಲುಕಿ ಸುಮಾರು ನಾಲ್ಕು ಗಂಟೆಗಳ ಕಾಲ ಸಾವಿನೊಂದಿಗೆ ಹೋರಾಟ ನಡೆಸಿದ ಘಟನೆ ನಡೆದಿದೆ.
ಘಟನೆಯ ವಿವರ:
ಬುಧವಾರ ರಾತ್ರಿ ಪಾಳಿಯ ಕೆಲಸ ಮುಗಿಸಿ ಹಾಗೂ ಗುರುವಾರ ಮುಂಜಾನೆ ಕೆಲಸಕ್ಕೆ ತೆರಳುತ್ತಿದ್ದ ಸುಮಾರು 8 ಕಾರ್ಮಿಕರು ಕಂಪನಿಯ ‘ಸೆಂಟ್ರಲ್ ಶಾಫ್ಟ್’ ಲಿಫ್ಟ್ ಮೂಲಕ ಗಣಿಯ ಆಳಕ್ಕೆ ಇಳಿಯುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ (Short Circuit) ನಿಂದಾಗಿ ಲಿಫ್ಟ್ ನೆಲಮಟ್ಟದಿಂದ ಸುಮಾರು 2,200 ಅಡಿ ಆಳದಲ್ಲಿ ಅರ್ಧಕ್ಕೇ ಸ್ಥಗಿತಗೊಂಡಿದೆ.
ಉಸಿರುಗಟ್ಟಿಸುವ ವಾತಾವರಣ:
ಲಿಫ್ಟ್ ಏಕಾಏಕಿ ನಿಂತಿದ್ದರಿಂದ ಗಾಬರಿಗೊಂಡ ಕಾರ್ಮಿಕರು ಹೊರಬರಲಾರದೆ ಪರದಾಡಿದ್ದಾರೆ. ಸುಮಾರು 2:30 ಗಂಟೆಗಳ ಕಾಲ ಲಿಫ್ಟ್ ಒಳಗೆ ಗಾಳಿಯ ಸಂಚಾರವಿಲ್ಲದೆ ಉಸಿರಾಟದ ತೊಂದರೆ ಅನುಭವಿಸಿದ್ದಾರೆ. ಕುಡಿಯಲು ನೀರು ಸಹ ಇಲ್ಲದೆ ತೀವ್ರ ಬಿಸಿಲು ಮತ್ತು ಉಸಿರುಗಟ್ಟುವಿಕೆಯಿಂದಾಗಿ ಹಲವು ಕಾರ್ಮಿಕರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ.
ರಕ್ಷಣಾ ಕಾರ್ಯಾಚರಣೆ:
ವಿಷಯ ತಿಳಿಯುತ್ತಿದ್ದಂತೆಯೇ ಕಂಪನಿಯ ತಾಂತ್ರಿಕ ತಂಡ ಸ್ಥಳಕ್ಕೆ ಧಾವಿಸಿ ದುರಸ್ತಿ ಕಾರ್ಯ ಕೈಗೊಂಡಿದೆ. ಸುದೀರ್ಘ ಕಾರ್ಯಾಚರಣೆಯ ನಂತರ ಕಾರ್ಮಿಕರನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತರಲಾಗಿದ್ದು, ತಕ್ಷಣವೇ ಎಲ್ಲರನ್ನು ಹಟ್ಟಿ ಗಣಿ ಕಂಪನಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾರ್ಮಿಕರ ಸುರಕ್ಷತೆಯ ಬಗ್ಗೆ ಕಂಪನಿಯ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿವೆ
