Tuesday, March 17, 2026
HomeUncategorizedಅಮನಿ ಕೆರೆ ತೋಟಿ ಏತ ನೀರಾವರಿ ಯೋಜನೆ; ರೈತರಿಗೆ ಶೀಘ್ರ ಪರಿಹಾರ: ಡಿಸಿಎಂ ಡಿ.ಕೆ. ಶಿವಕುಮಾರ್...

ಅಮನಿ ಕೆರೆ ತೋಟಿ ಏತ ನೀರಾವರಿ ಯೋಜನೆ; ರೈತರಿಗೆ ಶೀಘ್ರ ಪರಿಹಾರ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಬೆಂಗಳೂರು, ಮಾ.16: “ಅಮನಿ ಕೆರೆ ತೋಟಿ ಏತ ನೀರಾವರಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಬಾಕಿ ಇರುವ ಪರಿಹಾರದ ಬಗ್ಗೆ ಪರಿಶೀಲನೆ ಮಾಡಿ ಶೀಘ್ರವೇ ಪರಿಹಾರವನ್ನು ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಭರವಸೆ ನೀಡಿದರು.

ವಿಧಾನಸಭೆಯ ಗಮನ ಸೆಳೆವ ಸೂಚನೆ ಮೇಲೆ ನಡೆದ ಚರ್ಚೆ ವೇಳೆ ಶಾಸಕ ಸಿ.ಎಸ್ ಬಾಲಕೃಷ್ಣ ಅವರು ಚನ್ನರಾಯಪಟ್ಟಣ ಅಮನಿ ಕೆರೆ ತೋಟಿ ಏತ ನೀರಾವರಿಯೋಜನೆ ಕಾಮಗಾರಿ ಭೂಸ್ವಾಧೀನ ಪರಿಹಾರ ನೀಡದಿರುವುದರಿಂದ ಕಾಮಗಾರಿ ಪ್ರಕ್ರಿಯೆಗೆ ವಿಳಂಬವಾಗುತ್ತಿದೆ ಎಂದು ತಿಳಿಸಿದರು.

ಇದಕ್ಕೆ ಉತ್ತರ ನೀಡಿದ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು, “ಈ ಯೋಜನೆಯಲ್ಲಿ ಪಂಪ್, ಮೋಟಾರ್ ಎಲ್ಲವನ್ನು ಅಳವಡಿಸಲಾಗಿದೆ. ತಾಂತ್ರಿಕ ಕಾರಣಗಳಿಂದ ಸ್ವಾಧೀನಗೊಂಡ ಭೂಮಿಗೆ ಪರಿಹಾರ ಬಾಕಿ ಇದೆ ಎಂದು ಕಾಣುತ್ತದೆ. ಈ ಬಗ್ಗೆ ನಾನು ಪರಿಶೀಲನೆ ಮಾಡಿಸಿ ಹಣ ನೀಡಲಾಗುವುದು. ಕೆಲಸ ಮಾಡಲು ಅವಕಾಶ ಕೊಟ್ಟ ರೈತರು ನೀರನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿಲ್ಲ ಯಾಕೆ?. 100 ಮೀಟರ್ ಕೆಲಸ ಬಾಕಿ ಇದೆಯೋ, 500 ಮೀಟರ್ ಕೆಲಸ ಬಾಕಿ ಇದೆಯೋ ಆಕ್ಷೇಪ ವ್ಯಕ್ತಪಡಿಸುತ್ತಿರುವ ರೈತರ ಮನವೊಲಿಸಿ ಕೆಲಸ ಪೂರ್ಣಗೊಳಿಸಲು ಅವಕಾಶ ಕೊಡಿಸಿ. ಇಲ್ಲವಾದರೆ ಇದುವರೆಗೂ ಆಗಿರುವ ಕೆಲಸಗಳು ವ್ಯರ್ಥವಾಗುವುದಿಲ್ಲವೇ. ಕಾಮಗಾರಿ ಮಾಡಿ ಭೂಮಿಯಲ್ಲಿ ಪೈಪ್ ಗಳನ್ನು ಅಳವಡಿಸಿದ ಮೇಲೆ ಆ ಭೂ ಮಾಲೀಕರಿಗೆ ಪರಿಹಾರ ನೀಡಲೇಬೇಕು. ಆ ಕೆಲಸ ನಾವು ಮಾಡುತ್ತೇವೆ. ನೀವು ರೈತರಿಗೆ ಮನವೊಲಿಸಿ ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಲು ಸಹಕರಿಸಿ, ನೀವೇ ಉದ್ಘಾಟನೆ ಮಾಡಿ. ನಂತರ ನಾನು ಬಂದು ಉದ್ಘಾಟನೆ ಮಾಡುವೆ” ಎಂದು ಹೇಳಿದರು.

ಹೆಚ್ಚಿನ ಸುದ್ದಿ