‘ಹಜಾಮ’ ಪದ ಬಳಕೆಗೆ ಸಚಿವ ಶಿವರಾಜ್ ತಂಗಡಗಿ ಆಕ್ಷೇಪ
ಸವಿತಾ ಸಮಾಜದ ಕುರಿತ ನಿಂದನಾತ್ಮಕ ಪದ ಬಳಕೆಗೆ ಸಚಿವ ಶಿವರಾಜ್ ತಂಗಡಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ..
ಬೆಂಗಳೂರು: ಜ.25 : ಹುಟ್ಟಿನಿಂದ ಜಾತಿ ಬಂದಿಲ್ಲ, ವೃತ್ತಿಯಿಂದ ಜಾತಿ ಬಂದಿದ್ದು, ಸವಿತಾ ಸಮಾಜದವರನ್ನು ಕೀಳು ಭಾವನೆಯಿಂದ ನೋಡುವ ಪರಿಸ್ಥಿತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ .ಎಸ್.ತಂಗಡಗಿ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಯನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೌರಿಕ ವೃತ್ತಿ ಮಾಡುವ ಸವಿತಾ ಸಮಾಜದ ಬಂಧುಗಳನ್ನು ಕೆಲವೆಡೆ ‘ಹಜಾಮ’ ಎಂಬ ಕೀಳುಮಟ್ಟದ ಪದ ಬಳಸುವುದನ್ನು ಸಹಿಸಲು ಸಾಧ್ಯವಿಲ್ಲ. ಈ ಪದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ವಿಶೇಷ ಕಾನೂನು ತರುವ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಲಾಗುವುದು. ಅಗತ್ಯ ಬಿದ್ದರೆ ನಿಮ್ಮ ಸಮಾಜದ ಮುಖಂಡರ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ಯಲಾಗುವುದು
ಎಂದರು.
ಸಾರಬೇಕಿದೆ ಸಾಮಾಜಿಕ ಸಮಾನತೆ: ಸಮಾಜದಲ್ಲಿರುವ ಕೀಳು ಭಾವನೆಯನ್ನು ತೊಡೆದು ಹಾಕಿ, ಸಾಮಾಜಿಕ ಸಮಾನತೆಯನ್ನು ಸಾರುವ ಅಗತ್ಯವಿದೆ. ಹುಟ್ಟುವಾಗ ಯಾರು ಕೂಡ ಜಾತಿಯ ಸೀಲ್ ಹಾಕಿಕೊಂಡು ಹುಟ್ಟಿಲ್ಲ. ನಾನು ಕೂಡ ಸಣ್ಣ ಸಮುದಾಯದಿಂದಲೇ ಬಂದಿರುವುದು. ಕೀಳು ಮಟ್ಟದಿಂದ ಕರೆಯುವವರಿಗೆ ತಕ್ಕ ಪಾಠ ಕಲಿಸುವ ಅಗತ್ಯವಿದೆ ಎಂದರು.
ಇನ್ನು ಸವಿತಾ ಸಮುದಾಯದವರು ಒಗ್ಗಟ್ಟಿನಿಂದ ಮುನ್ನಡೆಯ ಬೇಕು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಅಗತ್ಯವಿದೆ ಎಂದು ಹೇಳಿರುವುದು ಛಲವಾದಿ ಸಮುದಾಯಕ್ಕೆ ಮಾತ್ರವಲ್ಲ. ಪ್ರತಿಯೊಂದು ಶೋಷಿತ ಸಮುದಾಯದವರು ಎಚ್ಚರಗೊಳ್ಳಬೇಕೆಂದು ಕರೆ ನೀಡಿರುವುದು. ಆ ನಿಟ್ಟಿನಲ್ಲಿ ಸವಿತಾ ಸಮುದಾಯದವರು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.
ಸವಿತಾ ಸಮಾಜದ ಕೊಡುಗೆ ಅಪಾರ: ಇನ್ನು ತಮ್ಮನ್ನು ಸಮಾಜ ಎಷ್ಟೇ ಕಡೆಗಣಿಸಿದರೂ ಅವೆಲ್ಲವನ್ನೂ ಸಕಾರಾತ್ಮಕವಾಗಿ ತೆಗೆದುಕೊಂಡು, ಸಂಗೀತದ ಮೂಲಕ ತಮ್ಮೆಲ್ಲ ನೋವುಗಳನ್ನು ಮರೆಯುತ್ತದೆ ಈ ಸಮುದಾಯ. ಇಂದಿಗೂ ಮಂಗಳವಾದ್ಯವಿಲ್ಲದೆ, ಚೌಲಕರ್ಮವಿಲ್ಲದೆ ಯಾವ ಶುಭ ಕಾರ್ಯಗಳು ಪ್ರಾರಂಭವಾಗುವುದೇ ಇಲ್ಲ. ಜೀವನದ ಪ್ರತಿಯೊಂದು ಹಂತದಲ್ಲೂ ಸವಿತಾ ಜನಾಂಗದವರ ಕೊಡುಗೆ ಅಪಾರ. ಇಂತಹ ತ್ಯಾಗಜೀವಿಗಳ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ಶ್ರೀ ಸವಿತಾ ಮಹರ್ಷಿಯವರನ್ನು ಗೌರವಿಸುವ ಈ ಸಂದರ್ಭ ಅವಿಸ್ಮರಣೀಯ ಎಂದರು.
ಅಲ್ಲದೆ, ಸವಿತಾ ಮಹರ್ಷಿಗಳು ತಮ್ಮ ಕಾಯಕವನ್ನು ಮಾಡುತ್ತಲೇ ಅಧ್ಯಯನವನ್ನು ಮುಂದುವರೆಸಿ, ಮಹಾ ಜ್ಞಾನಿಗಳಾದರು. ಅವರ ಈ ನಡೆ ನಮಗೆಲ್ಲ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್.ಮುತ್ತುರಾಜ್, ಚಲನಚಿತ್ರ ಸಾಹಸ ನಿರ್ದೇಶಕ ಡಿ.ಆರ್.ಕೃಷ್ಣಪ್ಪ, ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ, ಜಂಟಿ ನಿರ್ದೇಶಕ ಬಲವಂತರಾಯ ಪಾಟೀಲ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
