ಪ್ರತಿವರ್ಷ ಜನವರಿ 29 ರಂದು ಭಾರತದಲ್ಲಿ ಭಾರತೀಯ ವೃತ್ತಪತ್ರಿಕೆ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಈ ದಿನವನ್ನು ಭಾರತೀಯ ಪತ್ರಿಕೋದ್ಯಮದ ಮಹತ್ವವನ್ನು ಸ್ಮರಿಸಲು ಹಾಗೂ ಜನಜೀವನದಲ್ಲಿ ಪತ್ರಿಕೆಗಳ ಪಾತ್ರವನ್ನು ಗೌರವಿಸಲು ನಿಗದಿಪಡಿಸಲಾಗಿದೆ.
1780ರ ಜನವರಿ 29ರಂದು ಜೇಮ್ಸ್ ಆಗಸ್ಟಸ್ ಹಿಕ್ಕಿ ಅವರು ಭಾರತದ ಮೊದಲ ಪತ್ರಿಕೆಯಾದ “ಹಿಕ್ಕೀಸ್ ಬೆಂಗಾಲ್ ಗ್ಯಾಜೆಟ್” ಅನ್ನು ಪ್ರಾರಂಭಿಸಿದರು.
ಈ ಐತಿಹಾಸಿಕ ಘಟನೆ ನೆನಪಿಗಾಗಿ ಈ ದಿನವನ್ನು ಆಚರಿಸುವ ಸಂಪ್ರದಾಯ ಬೆಳೆಯಿತು.
ಪತ್ರಿಕೆಗಳ ಸ್ಥಾಪನೆಯ ಮೂಲ ಉದ್ದೇಶ ಜನತೆಗೆ ಸತ್ಯ, ನಿಖರ ಮತ್ತು ಸಮಯೋಚಿತ ಮಾಹಿತಿಯನ್ನು ನೀಡುವುದು.
ಆಡಳಿತದ ನಡೆ-ನುಡಿಗಳನ್ನು ಜನರ ಮುಂದೆ ತರುವುದರ ಮೂಲಕ ಜನಜಾಗೃತಿ ಮೂಡಿಸುವುದು,
ಸಮಾಜದ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವುದು ಹಾಗೂ ಪ್ರಜಾಪ್ರಭುತ್ವವನ್ನು ಬಲಪಡಿಸುವುದು
ಪತ್ರಿಕೋದ್ಯಮದ ಪ್ರಮುಖ ಗುರಿಯಾಗಿತ್ತು.
ವೃತ್ತಪತ್ರಿಕೆಗಳಿಂದ ಜನರಿಗೆ ಅಪಾರ ಅನುಕೂಲವಾಯಿತು. ದೇಶ-ವಿದೇಶದ ಸುದ್ದಿ, ರಾಜಕೀಯ, ಆರ್ಥಿಕತೆ, ಶಿಕ್ಷಣ, ಕೃಷಿ, ಆರೋಗ್ಯ, ವಿಜ್ಞಾನ, ಕ್ರೀಡೆ, ಸಾಹಿತ್ಯ—ಯಲ್ಲಾ ವಿಷಯಗಳು ಒಂದೇ ವೇದಿಕೆಯಲ್ಲಿ ಜನರಿಗೆ ತಲುಪಿದವು.
ಗ್ರಾಮೀಣ ಭಾಗದ ಜನರಿಗೂ ಜಗತ್ತಿನ ಸುದ್ದಿಯನ್ನು ತಲುಪಿಸುವಲ್ಲಿ ಪತ್ರಿಕೆಗಳು ಸೇತುವೆಯಾದವು.
ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಪತ್ರಿಕೆಗಳು ಜನರ ಮನಸ್ಸಿನಲ್ಲಿ ದೇಶಭಕ್ತಿಯ ಕಿಡಿ ಹಚ್ಚಿದ ಮಹತ್ವದ ಪಾತ್ರವಹಿಸಿದ್ದವು.
ಇಂದಿನ ಡಿಜಿಟಲ್ ಯುಗದಲ್ಲೂ ಸಹ ವೃತ್ತಪತ್ರಿಕೆಗಳ ಮಹತ್ವ ಕಡಿಮೆಯಾಗಿಲ್ಲ.
ಸಾಮಾಜಿಕ ಜಾಲತಾಣಗಳ ಗದ್ದಲದ ನಡುವೆ ನಂಬಿಗಸ್ಥ ಮಾಹಿತಿ, ಆಳವಾದ ವಿಶ್ಲೇಷಣೆ ಮತ್ತು ವಿಚಾರಪ್ರಧಾನ ಚಿಂತನೆಗಳನ್ನು ನೀಡುವಲ್ಲಿ ಪತ್ರಿಕೆಗಳು ಇನ್ನೂ ಮುಂಚೂಣಿಯಲ್ಲಿವೆ.
ಪತ್ರಿಕೆಗಳು ಸಮಾಜದ ಕನ್ನಡಿಯಂತೆ ಕಾರ್ಯನಿರ್ವಹಿಸುತ್ತಾ, ಜನರನ್ನು ಚಿಂತನೆಗೆ ಪ್ರೇರೇಪಿಸುವ ಶಕ್ತಿಯಾಗಿವೆ.
ಹೀಗಾಗಿ, ಭಾರತೀಯ ವೃತ್ತಪತ್ರಿಕೆ ದಿನಾಚರಣೆ ಪತ್ರಿಕೋದ್ಯಮದ ಸೇವೆ, ತ್ಯಾಗ ಮತ್ತು ಹೊಣೆಗಾರಿಕೆಯನ್ನು ನೆನಪಿಸುವ ಮಹತ್ವದ ದಿನವಾಗಿದೆ.
ಪತ್ರಿಕೆಗಳು ಇದ್ದರೆ ಪ್ರಜಾಪ್ರಭುತ್ವ ಜೀವಂತ—ಎಂಬ ಸತ್ಯವನ್ನು ಈ ದಿನ ನಮಗೆ ಮತ್ತೊಮ್ಮೆ ಮನವರಿಕೆ ಮಾಡುತ್ತದೆ. 📰💐
ಲೇಖನ.
ಆಂಜನೇಯ ಮಟ್ಟೂರ
ಶಿಕ್ಷಕರು ಗಂಗಾವತಿ.
