ಸವಣೂರು ಪ್ರವಾಸಿ ಮಂದಿರ ದುರವಸ್ಥೆ – ಪರಿಶೀಲನೆ ಕಾಗದಕ್ಕಷ್ಟೇ?
ಹಾವೇರಿ: ಜಿಲ್ಲೆ ಸವಣೂರು ತಾಲೂಕಿನ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಸ್ವಚ್ಛತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಶೌಚಾಲಯಗಳಲ್ಲಿ ಗಬ್ಬು ನಾರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದುರವಸ್ಥೆ ಅಧಿಕಾರಿಗಳ ಕಣ್ಣೆದುರೇ ನಡೆಯುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳದಿರುವುದು ಗಂಭೀರ ಪ್ರಶ್ನೆಗಳಿಗೆ ಕಾರಣವಾಗಿದೆ.
ಸರ್ಕಾರದ ಪ್ರವಾಸೋದ್ಯಮ ಇಲಾಖೆ ಅಧೀನದಲ್ಲಿರುವ ಸವಣೂರು ಪ್ರವಾಸಿ ಮಂದಿರದಲ್ಲಿ ಮೂಲಭೂತ ನಿರ್ವಹಣೆಯೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಶೌಚಾಲಯಗಳಲ್ಲಿ ಕಸಕಡ್ಡಿ, ಬಳಕೆಯ ಪ್ಯಾಕೆಟ್ಗಳು ಬಿದ್ದಿದ್ದು, ಕೊಳಚೆ ನೀರು ನಿಂತು ದುರ್ವಾಸನೆ ಹರಡುತ್ತಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರು ಬಳಸಬೇಕಾದ ಸ್ಥಳದಲ್ಲಿ ಇಂತಹ ಅಶುಚಿತ್ವ ಸಾರ್ವಜನಿಕ ಆರೋಗ್ಯಕ್ಕೂ ಅಪಾಯಕಾರಿಯಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಸಂಬಂಧಪಟ್ಟ ಅಧಿಕಾರಿಗಳು ಈ ಅವ್ಯವಸ್ಥೆಯನ್ನು ಗಮನಿಸಿದರೂ, ಸ್ವಚ್ಛತೆ, ದುರಸ್ತಿ ಹಾಗೂ ನಿರ್ವಹಣೆಗೆ ತಕ್ಷಣದ ಕ್ರಮ ಕೈಗೊಳ್ಳದಿರುವುದು ಇಲಾಖೆಯ ನಿರ್ಲಕ್ಷ್ಯವಲ್ಲವೇ ಎಂಬ ಪ್ರಶ್ನೆ ಮೂಡಿದೆ. ನಿಯಮಿತ ಪರಿಶೀಲನೆ ನಡೆಸಬೇಕಾದ ಅಧಿಕಾರಿಗಳ ಮೌನದಿಂದಾಗಿ ಪ್ರವಾಸಿ ಮಂದಿರ ದಿನೇ ದಿನೇ ದುಸ್ಥಿತಿಗೆ ಜಾರುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡಲೇ ಸ್ಪಂದಿಸಿ, ಹೊಣೆಗಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಪ್ರವಾಸಿ ಮಂದಿರವನ್ನು ಸ್ವಚ್ಛ ಹಾಗೂ ಬಳಕೆಗೆ ಯೋಗ್ಯವಾಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ: ಸೋಮಶೇಖರ ಲಮಾಣಿ


