ಬೀದರ್, ಜ.11: ವಯೋಸಹಜ ಕಾಯಿಲೆ ಮತ್ತು ಉಸಿರಾಟದ ಸಮಸ್ಯೆಯ ಕಾರಣ ತಮ್ಮ ತಂದೆ ಮಾಜಿ ಸಾರಿಗೆ ಸಚಿವ ಮತ್ತು ವೀರಶೈವ ಲಿಂಗಾಯತ ಮಹಾಸಭಾದ ಗೌರವಾಧ್ಯಕ್ಷರಾದ ಭೀಮಣ್ಣ ಖಂಡ್ರೆ ಅವರನ್ನು ಬೀದರ್ ನ ಗುದಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಒಂದು ವಾರದಿಂದ ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದು, ಕಳೆದ ಶುಕ್ರವಾರ ಆರೋಗ್ಯ ತೀವ್ರ ಕ್ಷೀಣಿಸಿತ್ತು, ಹೀಗಾಗಿ ತಾವು ಮಂಗಳೂರು ಪ್ರವಾಸ ಮೊಟಕುಗೊಳಿಸಿ ಬೀದರ್ ಗೆ ಆಗಮಿಸಿದ್ದಾಗಿ ತಿಳಿಸಿದ ಈಶ್ವರ ಖಂಡ್ರೆ, ಈಗ ತಂದೆಯವರ ಆರೋಗ್ಯದಲ್ಲಿ ತುಸು ಚೇತರಿಕೆಯಾಗಿದೆ, ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದರು.
ಭೀಮಣ್ಣ ಖಂಡ್ರೆ ಅವರಿಗೆ 103 ವರ್ಷವಾಗಿದ್ದು ರಕ್ತದೊತ್ತಡ ಮತ್ತು ನಾಡಿ ಬಡಿತದಲ್ಲಿ ವ್ಯತ್ಯಯವಾಗಿದೆ, ಉಸಿರಾಟದ ಸಮಸ್ಯೆಯೂ ಇದೆ. ವೈದ್ಯರು ದಿನದ 24 ಗಂಟೆಯೂ ತೀವ್ರನಿಗಾ ಇಟ್ಟಿದ್ದು, ಅವರು ಆರೋಗ್ಯವಂತರಾಗಿ ಮನೆಗೆ ಮರಳುತ್ತಾರೆ, ಇನ್ನೂ ಹಲವು ವರ್ಷ ತಮಗೆ ಮಾರ್ಗದರ್ಶನ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ತಂದೆಯವರ ಅಭಿಮಾನಿಗಳು, ಬೀದರ್ ಜನತೆ ಅವರ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸುವಂತೆ ಮನವಿ ಮಾಡಿದರು. .
