ಕಿತ್ತೂರು ಚನ್ನಮ್ಮಗೂ ಸಿಗಲಿ ಪ್ರಾಶಸ್ತ್ರ

ಬೈಲಹೊಂಗಲ: ಬೈಲಹೊಂಗಲ ನಗರದ ಕಿತ್ತೂರು ಚನ್ನಮ್ಮ ಸಮಾಧಿ ಸ್ಥಳ ರಾಷ್ಟ್ರೀಯ ಸ್ಮಾರಕವನ್ನಾಗಿಸಬೇಕು. ಹಾಗೂ ಪ್ರಾಧಿಕಾರಕ್ಕೆ 200 ಕೋಟಿ ರೂ. ಅನುದಾನ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ 23ನೇ ದಿನಕ್ಕೆ ಕಾಲಿಟ್ಟ ಹೋರಾಟ ಮಂಗಳವಾರ ತೀವ್ರ ಸ್ವರೂಪ ಪಡೆದು ಚಕ್ಕಡಿ, ಟ್ರ್ಯಾಕ್ಟರ್ ಹಾಗೂ ಬೈಕ್ ರ್ಯಾಲಿ ನಡೆಸಿ ಸರ್ಕಾರ ಮತ್ತು ಸ್ಥಳೀಯ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೈಕ್ ರ್ಯಾಲಿ, ಚಕ್ಕಡಿ ಹಾಗೂ ಟ್ರ್ಯಾಕ್ಟರ್ ಮೂಲಕ ಮುಖ್ಯ ವೇದಿಕೆವರೆಗೆ ಬೃಹತ್ ಮೆರವಣಿಗೆ ಮೇನ್ ರೋಡ್ ಮೂಲಕ ಸಾಗಿತು. ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತು. ಸರ್ಕಾರ ಹಾಗೂ ಶಾಸಕ ಮಹಾಂತೇಶ ಕೌಜಲಗಿ ವಿರುದ್ಧ ಪ್ರತಿಭಟನಾನಿರತರು ಘೋಷಣೆ ಕೂಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಗೋಳ್ಳಿ ರಾಯಣ್ಣನಿಗೆ ನೀಡಿದ ಪ್ರಾಶಸ್ತ್ರವನ್ನು ಕಿತ್ತೂರು ರಾಣಿ ಚನ್ನಮ್ಮನಿಗೂ ನೀಡಬೇಕೆಂದು ಒತ್ತಾಯಿಸಿದರು.
ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಚನ್ನಮ್ಮ ಅಭಿವೃದ್ಧಿ ಕಾಮಗಾರಿ ಹೆಸರಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಚನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕ ಕುರಿತು ಹೋರಾಟ ನಡೆದರೂ ವಿಧಾನ ಮಂಡಲದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಚಕಾರ ಎತ್ತಿಲ್ಲ ಎಂದು ಹೇಳಿದರು ಹಾಗೂ ರಾಷ್ಟ್ರೀಯ ಸ್ಮಾರಕಕ್ಕಾಗಿ ಸಿಎಂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದರೆ ಸಾಲದು. ಎರಡು ಸದನದಲ್ಲಿ ಅಂಗೀಕರಿಸಿ, ಕೇಂದ್ರಕ್ಕೆ ಕಳುಹಿಸಿದರೆ, ನಾವು ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ತರುತ್ತೇವೆ ಎಂದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, 23 ದಿನಗಳಿಂದ ಈ ಭಾಗದ ಜನರು ಜಾತ್ಯತೀತ, ಪಕ್ಷಾತೀತವಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸಿದರೂ ಶಾಸಕರು ಸ್ಪಂದಿಸದೆ ಕಿತ್ತೂರು ರಾಣಿ ಚನ್ನಮ್ಮನಿಗೆ ಅಗೌರವ ತೋರುತ್ತಿದ್ದಾರೆ. ಇದು ಹೀಗೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಇನ್ನು ತೀವ್ರತೆ ಹೆಚ್ಚಲಿದ್ದು, ಏನೇ ಅನಾಹುತವಾದರೂ ಶಾಸಕರೇ ಜವಾಬ್ದಾರರು ಎಂದು ಎಚ್ಚರಿಸಿದರು.
ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸರ್ಕಾರ, ಶಾಸಕರು ಶೀಘ್ರವೇ ಪ್ರತಿಭಟನಾನಿರತರ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಲಾಗುವುದು ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಕ್ಷೇತ್ರದಲ್ಲಿ ಜನರು ಹೋರಾಟ ನಡೆಸಿದ್ದರೆ ಶಾಸಕರು ದಾವಣಗೆರೆ ಚುನಾವಣೆಯಲ್ಲಿ ಮುಳುಗಿದ್ದಾರೆ. ಕ್ಷೇತ್ರದ ಸಮಸ್ಯೆ ಬಗೆಹರಿಸದವರು ಅಲ್ಲಿ ಪಕ್ಷಕ್ಕೆ ಹೇಗೆ ಮತ ತರಲು ಸಾಧ್ಯ ಎಂದು ಟೀಕಿಸಿದರು.
ಕಲಾವಿದ ಸಿ.ಕೆ.ಮೆಕ್ಕೇದ, ಶಿವಾನಂದ ಕೋಲಕಾರ, ರಫೀಕ್ ಬಡೇಘರ, ವಕೀಲ ಎಫ್.ಎಸ್.ಸಿದ್ದನಗೌಡರ, ಮಲ್ಲಿಕಾರ್ಜುನ ಹುಂಬಿ, ಬೀರಪ್ಪ ದೇಶನೂರ ಮಾತನಾಡಿದರು.
ಹೋರಾಟಗಾರರು ರಸ್ತೆಯಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿದರು. ಅರವಿಂದ ಬೆಲ್ಲದ ಭರವಸೆಯಿಂದ ತಾತ್ಕಾಲಿಕವಾಗಿ ಹೋರಾಟ ಸ್ಥಗಿತಗೊಳಿಸಿದರು.
ಹಿರಿಯ ನ್ಯಾಯವಾದಿ ಎಂ.ವೈ.ಸೋಮಣ್ಣನವರ್, ಅಪ್ಪಾಸಾಹೇಬ ಲಕ್ಕುಂಡಿ, ಮಡಿವಾಳೆಪ್ಪ ಹೋತಿ, ಶ್ರೀಶೈಲ ಯಡಳ್ಳಿ, ಸಥಲ ಶೋಪೃಥ, ರಾಜು ಕುಡಸೋಮನ್ನವರ್, ಮಹೇಶ ಹರಕುಣಿ. ಈಶ್ವವರ್ ಕೊಪ್ಪದ, ರಿತೇಶ್ ಪಾಟೀಲ್, ಶಾಂತಾ ಮಡ್ಡಿಕರ್, ಸುಭಾಸ್ ಬಾಗೇವಾದಿ, ಮುರುಗೇಶ್ ಗುಂಡೂರು, ಮಹಾನಗರ, ಆನಂದ ಮೂಗಿ, ಆನಂದಗೌಡ ಪಾಟೀಲ, ದುಂಡೇಶ ಗರಗಡ, ನಿಂಗಣಪ್ಪ ಚೌದನವರ, ಹೈದಿಮಾನಿ, ಮಹಾಂತೇಶ ಕಮ್ತ್, ಉದಯ ಕೊಟಬಾಗಿ, ಆಶಾ, ಕಸಮಳಗಿ ಕಿತ್ತೂರು ರಾಣಿ ಚನ್ನಮ್ಮನ ಒಂದು ಅಭಿಮಾನಿಗಳು ಹಾಗೂ ಇತರರು ಇದ್ದರು.
ವರದಿಗಾರರು: ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು)

