Thursday, August 13, 2026
HomeUncategorizedರಾಜ್ಯದ ಸಣ್ಣ ಗುತ್ತಿಗೆದಾರರ ಹೋರಾಟಕ್ಕೆ ಫಲ : ₹300 ಕೋಟಿ ಬಾಕಿ ಬಿಡುಗಡೆ ಮಾಡಿದ ಸರ್ಕಾರ

ರಾಜ್ಯದ ಸಣ್ಣ ಗುತ್ತಿಗೆದಾರರ ಹೋರಾಟಕ್ಕೆ ಫಲ : ₹300 ಕೋಟಿ ಬಾಕಿ ಬಿಡುಗಡೆ ಮಾಡಿದ ಸರ್ಕಾರ

ರಾಜ್ಯದ ಸಣ್ಣ ಗುತ್ತಿಗೆದಾರರ ದೀರ್ಘಕಾಲದ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ. ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ನಡೆಸಿದ ಸತತ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಇದೀಗ ಸಣ್ಣ ಕಾಮಗಾರಿಗಳ ಬಾಕಿ ಬಿಲ್ ಪಾವತಿಗಾಗಿ ₹300 ಕೋಟಿ ಹಣವನ್ನು ಬಿಡುಗಡೆ ಮಾಡಿದೆ.

ಈ ಹಿಂದೆ ಮಾರ್ಚ್ ತಿಂಗಳಲ್ಲಿ ಸರ್ಕಾರ ₹2,000 ಕೋಟಿ ಬಿಡುಗಡೆ ಮಾಡಿತ್ತು. ಅದರ ಮುಂದುವರಿದ ಭಾಗವಾಗಿ ಈಗ ₹300 ಕೋಟಿ ಬಿಡುಗಡೆ ಮಾಡಲಾಗಿದೆ.
ಈ ಹಣವನ್ನು ರಸ್ತೆ ಗುಂಡಿ ದುರಸ್ತಿ, ಕಟ್ಟಡ ಹಾಗೂ ಸೇತುವೆ ದುರಸ್ತಿಯಂತಹ ಸಣ್ಣ ಮತ್ತು ಮಧ್ಯಮ ಗಾತ್ರದ ಕಾಮಗಾರಿಗಳನ್ನು ನಡೆಸಿದ ಗುತ್ತಿಗೆದಾರರಿಗೆ ನೀಡಲಾಗುವುದು.

ಫಲಾನುಭವಿಗಳು: ಅಂದಾಜು 4,000 ಗುತ್ತಿಗೆದಾರರಿಗೆ ಈ ನಿರ್ಧಾರದಿಂದ ಅನುಕೂಲವಾಗಲಿದ್ದು, ಪ್ರಮುಖವಾಗಿ ₹10 ಲಕ್ಷಕ್ಕಿಂತ ಕಡಿಮೆ ಮೊತ್ತದ ಬಿಲ್ಗಳನ್ನು ಹೊಂದಿರುವವರಿಗೆ ಆದ್ಯತೆ ನೀಡಿ ಪಾವತಿಸಲಾಗುತ್ತದೆ.

ಸಿಎಂ ಭೇಟಿಗೆ ಗುತ್ತಿಗೆದಾರರ ಆಗ್ರಹ
ಲೋಕೋಪಯೋಗಿ ಇಲಾಖೆಯ ಈ ಕ್ರಮವನ್ನು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಆರ್. ಮಂಜುನಾಥ್ ಸ್ವಾಗತಿಸಿದ್ದಾರೆ. ಆದರೆ, ಹಣ ಬಿಡುಗಡೆಯ ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತಿದ್ದರೂ, ಮುಖ್ಯಮಂತ್ರಿಗಳ ಭರವಸೆ ಇನ್ನೂ ಈಡೇರಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಕೊಟ್ಟ ಮಾತಿನಂತೆ ಹಣ ಬಿಡುಗಡೆ ಮಾಡುತ್ತಿದೆ. ಆದರೆ ಪ್ರತಿಭಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನಮ್ಮನ್ನು ಕರೆಸಿ ಸಭೆ ನಡೆಸುವುದಾಗಿ ಭರವಸೆ ನೀಡಿದ್ದರು. ಇದುವರೆಗೆ ಸಿಎಂ ಭೇಟಿಗೆ ಅವಕಾಶ ಸಿಕ್ಕಿಲ್ಲ. ಕೂಡಲೇ ಮುಖ್ಯಮಂತ್ರಿಗಳು ನಮ್ಮ ಸಮಸ್ಯೆಗಳನ್ನು ಆಲಿಸಿ ಶಾಶ್ವತ ಪರಿಹಾರ ನೀಡಬೇಕು,” ಎಂದು ಮಂಜುನಾಥ್ ಒತ್ತಾಯಿಸಿದ್ದಾರೆ.

ಹೆಚ್ಚಿನ ಸುದ್ದಿ