ಚಿಕ್ಕಮಗಳೂರು ಏ ೧೦: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಮೂರು ದಿನಗಳಿಂದ ನಾಪತ್ತೆಯಾಗಿದ್ದ 14 ವರ್ಷದ ಕೇರಳದ ಬಾಲಕಿ ಶ್ರೀನಂದಾ ಎಂಬ ವಿದ್ಯಾರ್ಥಿಯ ಮೃತದೇಹ ಇಂದು ಮಾಣಿಕ್ಯಧಾರ ಜಲಪಾತದ ಹತ್ತಿರ ಅಂದಾಜು 1500 ದಿಂದ 2000 ಅಡಿ ಆಳದ ಪ್ರಪಾತದಲ್ಲಿ ಪತ್ತೆಯಾಗಿದೆ.
ಕೇರಳದಿಂದ ಬಂದಿದ್ದ ಬಾಲಕಿ ಏಪ್ರಿಲ್ 7 ರಂದು ಕಾಣೆಯಾಗಿದ್ದರು. ಎಸ್.ಡಿ.ಆರ್.ಎಫ್, ಅರಣ್ಯ ಇಲಾಖೆ ಮತ್ತು ಪೊಲೀಸ್ ತಂಡಗಳ ಮೂರು ದಿನಗಳ ತೀವ್ರ ಶೋಧ ಕಾರ್ಯದ ನಂತರ ಇಂದು ಏಪ್ರಿಲ್ 10 ರಂದು ಮೃತದೇಹ ಸಿಕ್ಕಿ ತನಿಖೆ ಮುಂದುವರಿದಿದೆ.
ಕೇರಳದಿಂದ ಏಪ್ರಿಲ್ 7ರಂದು ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ್ದ 40 ಜನರ ಪ್ರವಾಸಿ ತಂಡದಲ್ಲಿ ಶ್ರೀನಂದಾ ಕೂಡ ಇದ್ದರು. ಬಾಬಾಬುಡನ್ ಗಿರಿ ಇನಾಮು ದತ್ತಾತ್ರೇಯ ಪೀಠ ಹಾಗೂ ಮಾಣಿಕ್ಯಧಾರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಾಲಕಿ ಹಠಾತ್ತಾಗಿ ನಾಪತ್ತೆಯಾಗಿದ್ದರು. ಈ ಘಟನೆ ನಡೆದ ನಂತರ ಪೊಲೀಸರ ತಂಡ ನಾಪತ್ತೆಯಾಗಿದ್ದ ಶ್ರೀನಂದಾಳಿಗಾಗಿ ಕಾರ್ಯಚರಣೆಯನ್ನು ನಡೆಸಲಾಗಿತ್ತು . ಇದೀಗ ಹುಡುಗಿಯ ಮೃತದೇಹ ಪತ್ತೆಯಾಗಿದೆ.
ಬಾಲಕಿಯ ಪತ್ತೆಗಾಗಿ ಎಸ್ಡಿಆರ್ಎಫ್.ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ಎಎನ್ಎಫ್ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿದ್ದವು. ಇದು ದಟ್ಟವಾದ ಅರಣ್ಯ ಪ್ರದೇಶವೇನಲ್ಲ,ಶೋಲ ಅರಣ್ಯವಾಗಿದ್ದು ಕಡಿದಾದ ಕಣಿವೆ,ಪ್ರಪಾತಗಳಿಂದ ಕೂಡಿದ್ದ ಕಾರಣ ಡ್ರೋನ್ ಹಾಗೂ ಥರ್ಮಲ್ ಕ್ಯಾಮೆರಾಗಳನ್ನು ಶೋಧ ಕಾರ್ಯಚರಣೆಗೆ ಬಳಸಲಾಗಿತ್ತು.
ಸತತ ಮೂರು ದಿನಗಳ ಕಾಲ ನಡೆಸಿದ ತೀವ್ರ ಶೋಧದ ನಂತರ, ಇಂದು ಮಾಣಿಕ್ಯಧಾರಾದ ಅತ್ಯಂತ ಆಳವಾದ ಪ್ರಪಾತದ ಕೆಳಗೆ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಾಲಕಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾಳೆಯೇ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಕೇರಳದಿಂದ ಆಗಮಿಸಿದ್ದ ಪೋಷಕರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಪ್ರಾಪ್ತ ಬಾಲಕಿಯೊಬ್ಬಳು ಕಾಣೆಯಾಗಿ ಮೂರು ದಿನಗಳಾದರೂ ಕೂಡ ಪತ್ತೆಯಾಗದಿದ್ದ ಬಗ್ಗೆ ಪಶ್ಚಿಮ ವಲಯದ ಪೊಲೀಸ್ ಐಜಿ ಅವರು ಇಂದು ಚಿಕ್ಕಮಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಕಾರ್ಯಚರಣೆ ತಂಡದ ಮೇಲೆ ಗರಂ ಆಗಿ ವಿವಿಧ ತಂಡ ರಚಿಸಿ ಶೋಧ ಕಾರ್ಯಚರಣೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದರು.
ಮಾಣಿಕ್ಯಧಾರ ಜಲಪಾತದಿಂದ ಕೇವಲ ಅಂದಾಜು 1500ರಿಂದ 2000ಆಡಿ ಅಂದರೆ ಕಾಲು ಕಿಲೋ ಮೀಟರ್ ದೊರದಲ್ಲೇ ಈ ಮೃತ ದೇಹ ಪತ್ತೆಯಾಗಿದೆ, ಡ್ರೋನ್, ಪೊಲೀಸ್ ನಾಯಿ, ತರಬೇತಿ ಪಡೆದ ತಜ್ಞರ ಶೋಧಕಾರ್ಯ ತಂಡ ಈ ಎಲ್ಲವೂ ಇದ್ದು, ಕಾಣೆಯಾದ ಜಾಗದಿಂದ ಕಾಲು ಕಿಲೋಮೀಟರ್ ದೊರದಲ್ಲಿಯೇ ಬಿದಿದ್ದ ಶ್ರೀನಂದಾಳ ಮೃತ ದೇಹ ಪತ್ತೆ ಮಾಡಲು ನೂರು ಜನ ಸಿಬ್ಬಂದಿಗೆ ಮೂರು ದಿನವೇ ಬೇಕಾಯಿತು,ಈ ಮೂರು ದಿನಗಳ ಕಾಲ ನಾಪತ್ತೆಯಾದ ಶ್ರೀನಂದಾ ಳ ಪೋಷಕರು ಸೇರಿದಂತೆ ರಾಜ್ಯದ ಜನತೆಯನ್ನು ಈ ಪ್ರಖರಣ ಆತಂಕಕ್ಕೆ ತಳ್ಳಿತ್ತು , ಒಂದು ಸುಖಾಂತದೊಂದಿಗೆ ಈ ಪ್ರಖರಣ ಅಂತ್ಯಗೊಳ್ಳುತ್ತದೆ ಎಂದು ಬಾವಿಸಿದ ಜನತೆಗೆ ನಿರಾಸೆಯಾಗಿ ಶ್ರೀನಂದಾಳ ಈ ಅನುಮಾನಸ್ಪದ ಸಾವಿಗೆ ನಾಡಿನ ಜನರು ಕಂಬನಿ ಮಿಡಿದಿದ್ದಾರೆ.
