ಬೆಂಗಳೂರು,ಫೆ.21:
ಬೆಲವಾಲ್ ಫೌಂಡೇಶನ್ ಕರ್ನಾಟಕ ಮತ್ತು ಭಾರತದಲ್ಲಿ ಒಂದು ಕೋಟಿ ಗಿಡಗಳನ್ನು ನೆಡುವ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಅನೇಕ ಎನ್ಜಿಒಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸ್ವಯಂಸೇವಕರು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಪರಿಸರ ಸಂರಕ್ಷಣೆಯ ಈ ಬೃಹತ್ತಾದ ಕಾರ್ಯಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಲವಾಲ್ ಫೌಂಡೇಷನ್ ಸಂಸ್ಥಾಪಕ ಮತ್ತು ಸಿಡಿಒ ಸಂಜಯ್ ಬೆನವಾಲ್, ಪ್ರಗತಿ ಫೌಂಡೇಷನ್ ಸಂಸ್ಥಾಪಕರಾದ ಕಲ್ಯಾಣಮ್ಮ, ಎನ್ಜಿಒಗಳು ಹಾಗೂ ಕಾರ್ಪೊರೇಟ್ಗಳ ಬೆಂಬಲದೊಂದಿಗೆ ಕಾರ್ಯಕ್ರಮ ನಡೆಯುತ್ತಿದೆ.
ಪ್ರತಿಯೊಬ್ಬರೂ ಒಂದು ಗಿಡ ನೆಡಿ. ಆರೋಗ್ಯಕರ ಜೀವನ ಮತ್ತು ಶುದ್ಧ ಗಾಳಿಯಲ್ಲಿ ಉಸಿರಾಡುವ ಹಕ್ಕಿಗಾಗಿ ತಾಯಿ ಭೂಮಿ ಹಾಗೂ ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಯೋಜನೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ವರದಿಯ ಪ್ರಕಾರ, ಮಾರ್ಚ್ 2024ರ ವೇಳೆಗೆ ಕರ್ನಾಟಕದಲ್ಲಿ ಒಟ್ಟು 86,308.44 ಹೆಕ್ಟೇರ್ ಅರಣ್ಯ ಭೂಮಿಯನ್ನು ಅತಿಕ್ರಮಿಸಲಾಗಿದೆ. ಹೀಗಾಗಿ ಇಂದಿನ ಸಮಯದಲ್ಲಿ ವೃಕ್ಷಾರೋಪಣೆ ಅತ್ಯಂತ ಅಗತ್ಯವಾಗಿದೆ ಎಂದರು.
ಇದೀಗ ಭೂಮಿ ಸಹಾಯಕ್ಕಾಗಿ ಬೇಡುತ್ತಿದ್ದು, ಮರಗಳು ಅದರ ಮೌನ ರಕ್ಷಕರಾಗಿದ್ದಾರೆ. ಒಂದು ಕಾಲದಲ್ಲಿ ಹಸಿರು ಕಾಡುಗಳಿಂದ ಆವೃತವಾಗಿದ್ದ ನಮ್ಮ ಗ್ರಹ ಇಂದು ಅತಿರೇಕದ ಅರಣ್ಯನಾಶ ಮತ್ತು ಮಾಲಿನ್ಯದಿಂದ ಉಸಿರುಗಟ್ಟುತ್ತಿದೆ. ಪ್ರತಿಯೊಂದು ಮರ ಕಡಿತವಾಗುವಾಗಲೂ ನಾವು ಅಸುರಕ್ಷಿತ ಮತ್ತು ಜೀವವಿಲ್ಲದ ಭವಿಷ್ಯಕ್ಕೆ ಇನ್ನೊಂದು ಹೆಜ್ಜೆ ಹತ್ತಿರವಾಗುತ್ತೇವೆ. ಹೆಚ್ಚುತ್ತಿರುವ ತಾಪಮಾನ, ಮಾಲಿನ್ಯಗೊಂಡ ಗಾಳಿ, ಒಣಗುತ್ತಿರುವ ನದಿಗಳು ಹಾಗೂ ಅನಿಶ್ಚಿತ ಹವಾಮಾನವು ಪ್ರಕೃತಿಯ ನೋವಿನ ಸ್ಪಷ್ಟ ಸೂಚನೆಗಳಾಗಿವೆ ಎಂದು ಹೇಳಿದರು.
ಮರಗಳು ಕೇವಲ ಸಸ್ಯಗಳಲ್ಲ; ಅವು ಜೀವದಾತು. ಮರಗಳಿಲ್ಲದೇ ಭೂಮಿಯ ಮೇಲೆ ಜೀವನ ಸಾಧ್ಯವಿಲ್ಲ. ವೃಕ್ಷಾರೋಪಣೆ ಈಗ ಆಯ್ಕೆಯಲ್ಲ ಅದು ಸಮಯದ ತುರ್ತು ಅಗತ್ಯವಾಗಿದೆ. ಮರ ನೆಟ್ಟಾಗ, ಜೀವನ, ಕನಸುಗಳನ್ನು ನೆಡುತ್ತೇವೆ ಮತ್ತು ನಮ್ಮ ಮಕ್ಕಳಿಗಾಗಿ ಭವಿಷ್ಯವನ್ನು ರೂಪಿಸಲು ಮುಂದಾಗುತ್ತೇವೆ. ಕುಟುಂಬದ ಸದಸ್ಯರು, ಸ್ನೇಹಿತರು ಅಥವಾ ಮಹಾನ್ ವ್ಯಕ್ತಿಗಳ ಹೆಸರಿನಲ್ಲಿ, ಜನ್ಮದಿನ, ವಿವಾಹ ವಾರ್ಷಿಕೋತ್ಸವ ಅಥವಾ ಮದುವೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಉಡುಗೊರೆಯಾಗಿ ಒಂದು ಮರವನ್ನು ನೆಡುವುದು ಅತ್ಯಂತ ಅಗತ್ಯ, ಪ್ರತಿ ಗಿಡಕ್ಕೂ ಜಿಯೋ-ಟ್ಯಾಗ್ ಮಾಡಲಾಗುತ್ತಿದ್ದು, ನೀತಿಗಳು ಅಭಿವೃದ್ಧಿಯಾಗುವಂತೆ ಕಾರ್ಬನ್ ಕ್ರೆಡಿಟ್ಗಳನ್ನು ಸಂಗ್ರಹಿಸಲಾಗುವುದು ಹೆಚ್ಚಿನ ಮಾಹಿತಿಗೆ: 9740466377 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥಾನ್ ತತ್ವ ಸಂಸ್ಥೆಯ ಸಂಸ್ಥಾಪಕ ಶ್ರೀ ಬ್ರಜಾ ಚತುರ್ವೇದಿ, ಸುರಕ್ಷಾ ಎನ್ವಿರೋ ಸಲ್ಯೂಷನ್ಸ್ ನ ಸಂಸ್ಥಾಪಕ ಬಾಲಗಂಗಾಧರ್, ವರ್ಲ್ಡ್ ಸ್ಪಿರಿಚುಯಲ್ ಆರ್ಗನೈಸೇಷನ್ ಸಂಸ್ಥಾಪಕರಾದ ನಾರಾಯಣ್ ಕುಡ್ವ, ನಮ್ಮಹಲ್ಲಿ ರೇಡಿಯೋ ಸಂಸ್ಥೆಯ ಸಿಇಒ ಗಿರೀಶ್, ಹರಿತೋತ್ಸವ್ ಫೋರಂನ ನಿರ್ದೇಶಕ ಆರತಿ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಸಿಂಹ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.
