ಬೆಂಗಳೂರು ಏಪ್ರಿಲ್ 18; ಬೆಂಗಳೂರಿನ ಬಿ.ಎಂ.ಎಸ್. ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ಮೂರು ದಿನಗಳ ಕಾಲ ಯುವ ಮಾದರಿ ಸಂಸತ್ ಉತ್ಸವ ನಡೆಯಲಿದೆ.
ಕಾಲೇಜಿನ ಕ್ಯಾಂಪಸ್ ಅನ್ನು ಉತ್ಸಾಹ, ಸೃಜನಶೀಲತೆ ಮತ್ತು ಸಂಭ್ರಮದಿಂದ ತುಂಬಿದ ಚೈತನ್ಯಮಯ ವೇದಿಕೆಯಾಗಿಸಲಿದೆ.
ಪ್ರಸಿದ್ಧ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರುಕಿರಣ್ ಶೆಟ್ಟಿ, ನಟ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಚೈತ್ರ ಜೆ. ಆಚಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿ ವಿಶೇಷವಾಗಿ, ಸಿಇಟಿ ನಲ್ಲಿ 1000 ರ್ಯಾಂಕ್ ಒಳಗೆ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ರಕ್ಷಣಾ ಪಡೆ ಹಿನ್ನೆಲೆಯ ವಿದ್ಯಾರ್ಥಿಗಳಿಗೆ 100% ಬೋಧನ ಶುಲ್ಕ ವಿನಾಯಿತಿ ಘೋಷಿಸಿತು. ಜೊತೆಗೆ, ಓಪನ್ ಹೌಸ್ ಪ್ರಾಜೆಕ್ಟ್ ಪ್ರದರ್ಶನದ ವಿಜೇತರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಮುಂದಿನ ಎರಡು ದಿನಗಳ ಕಾಲ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಪ್ರತಿಭೆಯನ್ನು ಈ ಉತ್ಸವ ಅನಾವರಣಗೊಳಿಸಲಿದ್ದು ಇದು ಸೃಜನಶೀಲತೆ, ಸಂಸ್ಕೃತಿ ಮತ್ತು ಸಹಕಾರದ ನಿಜವಾದ ಸಂಭ್ರಮವಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಗಣ್ಯರು ಭಾಗವಹಿಸಿದ್ದರು.
