Thursday, September 10, 2026
Homeರಾಜ್ಯಫ್ರಾನ್ಸ್‌ನಲ್ಲಿ ಕೈಗಾರಿಕಾ ಸಚಿವ ಎಂ ಬಿ ಪಾಟೀಲ : ಲಿಸಿ ಏರೋಸ್ಪೇಸ್, ಆರ್ಕೆಮಾ ಕಂಪನಿಗಳ ಜತೆ...

ಫ್ರಾನ್ಸ್‌ನಲ್ಲಿ ಕೈಗಾರಿಕಾ ಸಚಿವ ಎಂ ಬಿ ಪಾಟೀಲ : ಲಿಸಿ ಏರೋಸ್ಪೇಸ್, ಆರ್ಕೆಮಾ ಕಂಪನಿಗಳ ಜತೆ ಮಹತ್ತ್ವದ ವಿಚಾರ ವಿನಿಮಯ

ಬೆಂಗಳೂರು: ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಬಂಡಾವಳ ಹೂಡಿಕೆ ಸೆಳೆಯುವ ಉದ್ದೇಶದೊಂದಿಗೆ ಫ್ರಾನ್ಸ್ ಪ್ರವಾಸದಲ್ಲಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಅವರು ಮೂರನೆಯ ದಿನವಾದ ಬುಧವಾರ ಲಿಸಿ ಏರೋಸ್ಪೇಸ್, ಆಬರ್ಟ್ ಅಂಡ್ ಡುವಲ್‌ ಮತ್ತು ಆರ್ಕೆಮಾ ಕಂಪನಿಗಳ ಜತೆ ಮಹತ್ತ್ವದ ಮಾತುಕತೆ ನಡೆಸಿದ್ದಾರೆ.

ಈ ಬಗ್ಗೆ ಪ್ಯಾರಿಸ್ ನಿಂದ ಮಾಹಿತಿ ನೀಡಿರುವ ಅವರು, ಸಂಕೀರ್ಣ ಮೆಟಾಲಿಕ್ ಮೆಟೀರಿಯಲ್ ಕ್ಷೇತ್ರದಲ್ಲಿ ಅಗ್ರ ಕಂಪನಿಯಾಗಿರುವ ಆಬರ್ಟ್ ಅಂಡ್ ಡುವಲ್ ಕಂಪನಿಗೆ ಬೆಳಗಾವಿಯಲ್ಲಿ ಈಗಾಗಲೇ ಇರುವ ತನ್ನ ಉತ್ಪಾದನಾ ಘಟಕದ ಸಾಮರ್ಥ್ಯವನ್ನು ಹೆಚ್ಚಿಸುವಂತೆ ಕೋರಲಾಗಿದೆ ಎಂದಿದ್ದಾರೆ.

ಕಂಪನಿಯು ಬೆಳಗಾವಿಯಲ್ಲಿನ ಏಕಸ್ ಏರೋಸ್ಪೇಸ್ ವಿಶೇಷ ಆರ್ಥಿಕ ವಲಯದಲ್ಲಿ ನೆಲೆಯೂರಿದೆ. ಕಂಪನಿಯು ಮತ್ತಷ್ಟು ಹೂಡಿಕೆ ಮಾಡುವ ಕುರಿತು ಏಕಸ್ ಜತೆ ಚರ್ಚಿಸಬೇಕಾದ ಅಗತ್ಯವನ್ನು ರಾಜ್ಯ ಸರಕಾರ ಮತ್ತು ಕಂಪನಿಯ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ.
ಕಂಪನಿಯು ರಾಜ್ಯದಲ್ಲಿ
ಸ್ಕ್ವಾಡ್ ಫೋರ್ಜಿಂಗ್ ಇಂಡಿಯಾ ಜತೆಯಲ್ಲೂ ಸಹಭಾಗಿತ್ವ ಹೊಂದಿದೆ
ಎಂದು ಅವರು ತಿಳಿಸಿದ್ದಾರೆ.

ಲಿಸಿ ಏರೋಸ್ಪೇಸ್ ಕಂಪನಿಯು ಬಿಡಿಭಾಗಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿದ್ದು, ಬೆಂಗಳೂರಿನಲ್ಲಿ ತಯಾರಿಕಾ ಘಟಕವನ್ನು ಹೊಂದಿದೆ. ಕಂಪನಿಯು ತನ್ನ ಭವಿಷ್ಯದ ಹೂಡಿಕೆ ಯೋಜನೆಗಳನ್ನು ಹಂಚಿಕೊಂಡಿದೆ. ನಾವು ರಾಜ್ಯದಲ್ಲೇ ಹೂಡಿಕೆ ಮಾಡುವಂತೆ ಹೇಳಿದ್ದೇವೆ ಎಂದು ಅವರು ನುಡಿದಿದ್ದಾರೆ.

ಬೆಂಗಳೂರಿನಲ್ಲಿ ತನ್ನ ತಯಾರಿಕಾ ಸ್ಥಾವರ ಹೊಂದಿರುವ ಮೆಟೀರಿಯಲ್ಸ್ ಕ್ಷೇತ್ರದ ಆರ್ಕೆಮಾ ಕಂಪನಿಯೊಂದಿಗಿನ ಮಾತುಕತೆಯೂ ಸಕಾರಾತ್ಮಕವಾಗಿ ನಡೆಯಿತು. ಮುಖ್ಯವಾಗಿ ಬ್ಯಾಟರಿ ಉತ್ಪಾದನೆಗೆ ಇರುವ ಸದವಕಾಶಗಳ ಬಗ್ಗೆ ಮನದಟ್ಟು ಮಾಡಿಕೊಡಲಾಗಿದೆ ಎಂದು ಪಾಟೀಲ ಮಾಹಿತಿ ನೀಡಿದ್ದಾರೆ.

ಮಾತುಕತೆಯಲ್ಲಿ ಲಿಸಿ ಏರೋಸ್ಪೇಸ್ ಕಂಪನಿಯ ಉನ್ನತ ಪ್ರತಿನಿಧಿಗಳಾದ ಫ್ರಾಂಕೋಯಿಸ್ ಕ್ಸೇವಿಯರ್, ಭಾರತದ ವಿಭಾಗದ ಮುಖ್ಯಸ್ಥ ಅನಿಲ್ ಚೌಧರಿ, ಆರ್ಕೆಮಾ ಕಂಪನಿಯ ಉಪಾಧ್ಯಕ್ಷ ಅಬ್ದುಲ್ ಖಾದರ್ ಕದ್ರಿ, ಮಾಥ್ಯೂ ಲಾರೆಂಟ್, ವರ್ಜಿನ್ ಗುರಿನ್, ಆಬರ್ಟ್ ಅಂಡ್ ಡುವನ್ ಸಿಎಫ್‌ಒ ಪ್ಯಾಟ್ರಿಕ್ ಭಾಗವಹಿಸಿದ್ದರು.

ಫ್ರಾನ್ಸ್ ಕನ್ನಡ ಬಳಗದ ಭೇಟಿ (ಬಾಕ್ಸ್)
ಪ್ಯಾರಿಸ್‌ನಲ್ಲಿ ಸಕ್ರಿಯವಾಗಿರುವ ‘ಫ್ರಾನ್ಸ್ ಕನ್ನಡ ಬಳಗ’ದ ಪದಾಧಿಕಾರಿಗಳು ಸಚಿವ ಎಂ ಬಿ ಪಾಟೀಲ ಅವರನ್ನು ಬುಧವಾರ ಭೇಟಿಯಾಗಿದ್ದರು.

ಈ ಸಂದರ್ಭದಲ್ಲಿ ಬಳಗದ ಸದಸ್ಯರು ಫ್ರಾನ್ಸ್ ಮತ್ತು ಕರ್ನಾಟಕದ ಬಲವರ್ಧನೆಗೆ ಅನೇಕ ಚಿಂತನೆಗಳನ್ನು ಹಂಚಿಕೊಂಡರು. ಜತೆಗೆ ಫ್ರಾನ್ಸ್ ನಲ್ಲಿ ಕನ್ನಡ ಸಂಸ್ಕೃತಿ, ಭಾಷೆ, ಸಾಂಸ್ಕೃತಿಕ ವಿನಿಮಯ, ವಿದ್ಯಾರ್ಥಿಗಳಿಗೆ ಒದಗಿಸಬೇಕಾದ ಅವಕಾಶ ಇತ್ಯಾದಿಗಳ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು ಎಂದು ಸಚಿವರು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ