ಶಿರಸಿ: ದಕ್ಷ, ಪ್ರಾಮಾಣಿಕ ಹಾಗೂ ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಪಿಎಸ್ಐ ನಾಗಪ್ಪ.ಬಿ ಅವರಿಗೆ 2025-26ನೇ ಸಾಲಿನ ಡಿಜಿ ಮತ್ತು ಐಜಿಪಿ ಶ್ಲಾಘನಾ ಪದಕ ಲಭಿಸಿದೆ.
ಈ ಹಿಂದೆ ಅತ್ಯುತ್ತಮ ಸೇವೆಗಾಗಿ ಮುಖ್ಯಮಂತ್ರಿ ಬಂಗಾರದ ಪದಕಕ್ಕೂ ಭಾಜನರಾಗಿದ್ದ ನಾಗಪ್ಪ ಅವರು, ತಮ್ಮ ಕರ್ತವ್ಯನಿಷ್ಠೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತೋರಿದ ಕಾರ್ಯಕ್ಷಮತೆ ಹಾಗೂ ಸಾರ್ವಜನಿಕರೊಂದಿಗೆ ಬೆಳೆಸಿಕೊಂಡಿರುವ ಉತ್ತಮ ಬಾಂಧವ್ಯದ ಮೂಲಕ ಪೊಲೀಸ್ ಇಲಾಖೆಯಲ್ಲಿ ವಿಶೇಷ ಗುರುತನ್ನು ಮೂಡಿಸಿದ್ದಾರೆ.
ಸೇವಾ ಅವಧಿಯಲ್ಲಿ ಹಲವಾರು ಮಹತ್ವದ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿರುವ ಅವರು, ಅಪರಾಧ ನಿಯಂತ್ರಣ, ಸಾರ್ವಜನಿಕ ದೂರುಗಳ ತ್ವರಿತ ವಿಲೇವಾರಿ ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬಲಪಡಿಸುವಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಅವರ ಕಾರ್ಯವೈಖರಿ ಮತ್ತು ಸಾಧನೆಯನ್ನು ಪರಿಗಣಿಸಿ ರಾಜ್ಯ ಪೊಲೀಸ್ ಇಲಾಖೆಯು ಡಿಜಿ ಮತ್ತು ಐಜಿಪಿ ಶ್ಲಾಘನಾ ಪದಕ ನೀಡಿ ಗೌರವಿಸಿದೆ.
