Wednesday, June 17, 2026
HomeUncategorizedಕಾಗವಾಡ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳ ಬಂಧನ, ಮೂರು ವಾಹನಗಳ ವಶ

ಕಾಗವಾಡ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳ ಬಂಧನ, ಮೂರು ವಾಹನಗಳ ವಶ

ಕಾಗವಾಡ: ಮೋಟಾರ್‌ಸೈಕಲ್ ಕಳವು ಪ್ರಕರಣವನ್ನು ಭೇದಿಸುವಲ್ಲಿ ಕಾಗವಾಡ ಪೊಲೀಸರು ಯಶಸ್ವಿಯಾಗಿದ್ದು, ಅಂತರರಾಜ್ಯ ಮಟ್ಟದಲ್ಲಿ ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಬಂಧಿಸಿ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ 26ರಂದು ಮನೆಯ ಮುಂದೆ ನಿಲ್ಲಿಸಲಾಗಿದ್ದ ಹೀರೋ ಎಚ್‌ಎಫ್ ಡಿಲಕ್ಸ್ ಬೈಕ್ ಕಳುವಾಗಿದ್ದ ಕುರಿತು ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೊಂಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.

ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ (ಐಪಿಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ, ಅಥಣಿ ಡಿವೈಎಸ್‌ಪಿ ಪ್ರಶಾಂತ ಮುನ್ನೋಳ್ಳಿ ಅವರ ಮಾರ್ಗದರ್ಶನದಲ್ಲಿ, ಅಥಣಿ ವೃತ್ತದ ಸಿಪಿಐ ಸಂತೋಷ ಹಳ್ಳೂರ ನೇತೃತ್ವದಲ್ಲಿ ಹಾಗೂ ಕಾಗವಾಡ ಪಿಎಸ್‌ಐ ರಾಘವೇಂದ್ರ ಖೋತ ಅವರ ಮುಂದಾಳತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ತನಿಖೆಯ ವೇಳೆ ರಂಜೀತ್ ಶ್ರೀರಂಗ ಲೋಖಂಡ (25), ನಿವಾಸಿ ಮಲ್ಲಾರಿವಾಡಿ-ಮಂಗಸೂಳಿ, ತಾಲ್ಲೂಕು ಕಾಗವಾಡ, ಜಿಲ್ಲೆ ಬೆಳಗಾವಿ ಎಂಬಾತನನ್ನು ಬಂಧಿಸಲಾಯಿತು.

ಆರೋಪಿಯಿಂದ ಕೆಳಕಂಡ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ:

ಹೀರೋ ಎಚ್‌ಎಫ್ ಡಿಲಕ್ಸ್ (ಕೆಎ-23 ಇಇ-1868) – ₹30,000

ಹೊಂಡಾ ಸ್ಪ್ಲೆಂಡರ್ ಪ್ಲಸ್ (ಎಂಎಚ್-10 ಬಿ7-8350) – ₹50,000

ಹೊಂಡಾ ಆಕ್ಟಿವಾ (ಎಂಎಚ್-10 ಡಿಎಮ್-0952) – ₹45,000

ಒಟ್ಟು ₹1.25 ಲಕ್ಷ ಮೌಲ್ಯದ ಮೂರು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ವಾಹನಗಳು ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯ ಒಂದು ಹಾಗೂ ಮಹಾರಾಷ್ಟ್ರ ರಾಜ್ಯದ ಮಿರಜ ಮತ್ತು ಕವಟೇಮಹಾಕಾಳ ಪೊಲೀಸ್ ಠಾಣೆಗಳ ವ್ಯಾಪ್ತಿಯ ಎರಡು ಕಳವು ಪ್ರಕರಣಗಳಿಗೆ ಸಂಬಂಧಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಕಾರ್ಯಾಚರಣೆಯಲ್ಲಿ ಎಎಸ್‌ಐ ಎಸ್.ವಿ. ಹಣಜಿ, ಸಿಎಚ್‌ಸಿ ಆರ್.ಪಿ. ಕಾಟೇಕರಿ, ಸಿಬ್ಬಂದಿ ಎಸ್.ಎಸ್. ನಂದಿವಾರ, ಎ.ಎಲ್. ಬಾಯಗೋಣೆ ಸೇರಿದಂತೆ ಇತರರು ಹಾಗೂ ತಾಂತ್ರಿಕ ವಿಭಾಗದ ವಿನೋದ್ ಕಕ್ಕನ್ನವರ ಸಹಕರಿಸಿದ್ದರು.

ಈ ಯಶಸ್ವಿ ಕಾರ್ಯಾಚರಣೆಗೆ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು ತನಿಖಾ ತಂಡವನ್ನು ಅಭಿನಂದಿಸಿದ್ದಾರೆ.

ಹೆಚ್ಚಿನ ಸುದ್ದಿ