ಬೆಂಗಳೂರು: ಅಣಕು ನ್ಯಾಯಾಲಯಗಳು ನ್ಯಾಯಾಂಗ ಕ್ಷೇತ್ರವನ್ನು ಸಬಲೀಕರಣಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ನ್ಯಾಯದಾನದ ಆಡಳಿತ ವ್ಯವಸ್ಥೆಗೆ ಹೊಸ ಆಯಾಮ ನೀಡುತ್ತವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ರವಿ ಹೊಸಮನಿ ಹೇಳಿದ್ದಾರೆ.
ಐಸಿಎಫ್ಐ ಲಾ ಸ್ಕೂಲ್ನಲ್ಲಿ ಎನ್.ಜೆ. ಯಶಸ್ವಿ ಸ್ಮಾರಕ ಅಣಕು ನ್ಯಾಯಾಲಯ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿ ಸಮುದಾಯಕ್ಕೆ ಅಣಕು ನ್ಯಾಯಾಲಯಗಳು ಪ್ರೇರಣೆಯಾಗಬೇಕು. ನ್ಯಾಯಾಲಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ನೈಜ ಚಿತ್ರಣವನ್ನು ಕಟ್ಟಿಕೊಡುತ್ತವೆ. ವಿದ್ಯಾರ್ಥಿ ಸಮುದಾಯ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು.
ವಿದ್ಯಾರ್ಥಿಗಳಲ್ಲಿ ವಕಾಲತ್ತು ಕೌಶಲ್ಯ ಮತ್ತು ಅನುಭವಾಧಾರಿತ ಕಾನೂನು ಶಿಕ್ಷಣವನ್ನು ಉತ್ತೇಜಿಸುವಲ್ಲಿ ಇದು ಮಹತ್ವ ಹೆಜ್ಜೆ ಎಂದರು.
ಈ ಸ್ಪರ್ಧೆಯಲ್ಲಿ 10 ತಂಡಗಳು ಸಂಶೋಧನೆ, ಕರಡು ರಚನೆ, ವಾದ-ಪ್ರತಿವಾದ ಕೌಶಲ್ಯಗಳನ್ನು ಪರೀಕ್ಷಿಸುವ ಬೌದ್ಧಿಕ ಸುತ್ತುಗಳಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು.
ಪ್ರೊ-ವೈಸ್ ಚಾನ್ಸಲರ್ ಡಾ. ಮುದ್ದು ವಿನಯ್, ವಿಭಾಗದ ಮುಖ್ಯಸ್ಥರಾದ ಡಾ. ರಾಜಶ್ರೀ ಪಾಟೀಲ್ ಮಾರ್ಗದರ್ಶನದಲ್ಲಿ ಅಣಕು ನ್ಯಾಯಾಲಯ ಸ್ಪರ್ಧೆ ಆಯೋಜಿಸಲಾಯಿತು. ಅವರ ಮಾರ್ಗದರ್ಶನದಿಂದ ಸ್ಪರ್ಧೆ ಸುಗಮವಾಗಿ ನಡೆಯಿತು. ಸಂಸ್ಥೆಯ ಶೈಕ್ಷಣಿಕ ವಾತಾವರಣಕ್ಕೆ ಈ ಸ್ಪರ್ಧೆ ಮೆರಗು ತಂದಿತು.
ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಾ. ಸುರೇಶ್ ವಿ. ನಾಡಗೌಡರ್, ಡೀನ್ ಡಾ. ಸಂದೀಪ್ ದೇಸಾಯಿ ಅವರು ವಿದ್ಯಾರ್ಥಿಗಳಿಗೆ ಅನಕು ನ್ಯಾಯಾಲಯ ಸ್ಪರ್ಧೆಗಳ ಮಹತ್ವವನ್ನು ವಿವರಿಸಿ, ಈ ಸ್ಪರ್ಧೆ, ಸಮರ್ಥ, ಆತ್ಮವಿಶ್ವಾಸಿ ಮತ್ತು ಸಾಮಾಜಿಕ ಹೊಣೆಗಾರಿಕೆಯುಳ್ಳ ಕಾನೂನು ವೃತ್ತಿಪರರನ್ನು ಬೆಳೆಸುವಲ್ಲಿ ಸಹಕಾರಿಯಾಗಲಿದೆ. ಸಂಶೋಧನಾ ಶ್ರೇಷ್ಠತೆ, ನೈತಿಕ ವಕಾಲತ್ತು ಮತ್ತು ವೃತ್ತಿಪರ ಅಖಂಡತೆಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಕಾನೂನು ಕ್ಷೇತ್ರದ ಗಣ್ಯರು ಮತ್ತು ಅಕಾಡೆಮಿಕ್ ವಲಯದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
