Wednesday, March 18, 2026
Homeಜಿಲ್ಲಾ ಸುದ್ದಿಗಳುಏವೂರು ಗ್ರಾಮದ ರೈತ ದಾರಿಗಳಿಗೆ ಜಾಲಗಿಡಗಳ ದಿಗ್ಬಂಧನ: ಜೆಸಿಬಿ ಮೂಲಕ ತೆರವುಗೊಳಿಸಲು ರೈತ ಸಂಘದಿಂದ ತಾ.ಪಂ....

ಏವೂರು ಗ್ರಾಮದ ರೈತ ದಾರಿಗಳಿಗೆ ಜಾಲಗಿಡಗಳ ದಿಗ್ಬಂಧನ: ಜೆಸಿಬಿ ಮೂಲಕ ತೆರವುಗೊಳಿಸಲು ರೈತ ಸಂಘದಿಂದ ತಾ.ಪಂ. ಇಒಗೆ ಆಗ್ರಹ

ಸುರಪುರ: ತಾಲೂಕಿನ ಏವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಜಾಲಗಿಡಗಳು ಮತ್ತು ಮುಳ್ಳಿನ ಕಂಠಿಗಳು ದಟ್ಟವಾಗಿ ಬೆಳೆದು ನಿಂತಿವೆ. ಇದರಿಂದಾಗಿ ರೈತರು ತಮ್ಮ ಹೊಲಗಳಿಗೆ ಎತ್ತಿನ ಬಂಡಿ ಹಾಗೂ ಕೃಷಿ ಉಪಕರಣಗಳೊಂದಿಗೆ ಸಂಚರಿಸಲು ತೀವ್ರ ತೊಂದರೆಯಾಗುತ್ತಿದ್ದು, ಕೂಡಲೇ ಇವುಗಳನ್ನು ತೆರವುಗೊಳಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘವು ಒತ್ತಾಯಿಸಿದೆ.
ಈ ಕುರಿತು ಸುರಪುರ ತಾಲ್ಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (EO) ಮನವಿ ಪತ್ರ ಸಲ್ಲಿಸಿರುವ ರೈತ ಸಂಘದ ಏವೂರು ಗ್ರಾಮ ಘಟಕದ ಅಧ್ಯಕ್ಷರಾದ ದೇವಿಂದ್ರಪ್ಪ ದೊರೆ ಅವರು, ಗ್ರಾಮದ ಪ್ರಮುಖ ಕೃಷಿ ದಾರಿಗಳು ಸಂಪೂರ್ಣವಾಗಿ ಮುಚ್ಚಿಹೋಗಿವೆ ಎಂದು ದೂರಿದ್ದಾರೆ.

ಪ್ರಮುಖ ದಾರಿಗಳ ಬಂದ್:
ಗ್ರಾಮದ ಬಸವಣ್ಣ ದೇವಸ್ಥಾನದಿಂದ ವಾರಿಯವರ ಹೊಲದ ದಾರಿ, ಲಕ್ಕಂಗೋಳ ಹೊಲದಿಂದ ಜಿರ ಹೊಲದ ದಾರಿ, ಕೆಂಬಾವಿ ರಸ್ತೆ, ವಡಗೇರಾ ರಸ್ತೆ ಹಾಗೂ ಗುಂಡಾಪುರಕ್ಕೆ ಹೋಗುವ ದಾರಿಗಳ ಇಕ್ಕೆಲಗಳಲ್ಲಿ ಜಾಲಗಿಡಗಳು ಬೆಳೆದಿವೆ. ಇದರಿಂದಾಗಿ ರೈತರು ಹೊಲಕ್ಕೆ ಹೋಗಲು ಸಾಧ್ಯವಾಗದೆ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಈ ಹಿಂದೆ ಮೌಖಿಕವಾಗಿ ಮನವಿ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ಉಗ್ರ ಹೋರಾಟದ ಎಚ್ಚರಿಕೆ:
ಮನವಿ ಪತ್ರ ತಲುಪಿದ ೩ ರಿಂದ ೪ ದಿನಗಳ ಒಳಗಾಗಿ ಜೆಸಿಬಿ ಯಂತ್ರದ ಮೂಲಕ ರಸ್ತೆಯ ಬದಿಯ ಮುಳ್ಳಿನ ಗಿಡಗಳನ್ನು ಮತ್ತು ಕಲ್ಲುಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಒಂದು ವೇಳೆ ಅಧಿಕಾರಿಗಳು ಈ ಮನವಿಯನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ರೈತ ಸಂಘದ ವತಿಯಿಂದ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.
ಈ ಮನವಿಯ ಪ್ರತಿಗಳನ್ನು ಈಗಾಗಲೇ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಹಾಗೂ ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ.

ಹೆಚ್ಚಿನ ಸುದ್ದಿ