ಬೆಂಗಳೂರು: ಕುರುಬ ಸಮುದಾಯವನ್ನು (Kuruba Community) ಎಸ್ಟಿ ಪಟ್ಟಿಗೆ (ST List) ಸೇರಿಸುವ ವಿಚಾರ ಜಾತಿ ಜಟಾಪಟಿಗೆ ವೇದಿಕೆ ಆಗಿದೆ. ಎಸ್ಟಿಗೆ ಸೇರ್ಪಡೆ ಮಾಡುವ ಅಂತಿಮ ತೀರ್ಮಾನಕ್ಕೂ ಮುನ್ನವೇ ವಾಲ್ಮೀಕಿ ಸಮುದಾಯ (Valmiki Community) ಮಹತ್ವದ ಸಭೆ ಕರೆದಿದೆ.
ಸೆಪ್ಟಂಬರ್ 18ರಂದು ಹರಿಹರ ವಾಲ್ಮೀಕಿ ಗುರುಪೀಠದಲ್ಲಿ ಸಭೆ ಕರೆಯಲಾಗಿದ್ದು, ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಮೂರು ಪ್ರಮುಖ ವಿಚಾರಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿದ್ದು, ಸಭೆಗೆ ವಾಲ್ಮೀಕಿ ಸಮುದಾಯದ ಸಚಿವರು, ಶಾಸಕರು, ಮಾಜಿ ಶಾಸಕರು, ಎಂಎಲ್ಸಿ, ಮಾಜಿ ಎಂಎಲ್ಸಿ, ಧರ್ಮದರ್ಶಿಗಳು, ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರಿಗೆ ಸಭೆಗೆ ಆಹ್ವಾನಿಸಲಾಗಿದೆ.
ಸಭೆಯ ಅಜೆಂಡಾ ಏನು?
ವಾಲ್ಮೀಕಿ ನಾಯಕ ಜಾತಿಗೆ ಇತರೆ ಮೇಲ್ವರ್ಗದ ಜಾತಿಗಳನ್ನು ಸೇರ್ಪಡೆ ಮಾಡುತ್ತಿರುವ ಸರ್ಕಾರದ ನಡೆ ಬಗ್ಗೆ ತೀರ್ಮಾನ.
ನಾಯಕ ತಳವಾರ ಹೆಸರಿನಲ್ಲಿ ಇತರೆ ಜಾತಿಯ ತಳವಾರರು ತೆಗೆದುಕೊಳ್ಳುತ್ತಿರುವ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದನ್ನು ತಡೆಯಲು ಸರ್ಕಾರಕ್ಕೆ ಒತ್ತಾಯ.
ರಾಜ್ಯ ಸರ್ಕಾರ ಜಾತಿ ಗಣತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಜಾತಿ ಕಾಲಂ ನಲ್ಲಿ ಜಾತಿ ಹೆಸರನ್ನು ನಮೂದಿಸುವ ಕುರಿತು ಚರ್ಚೆ.
