ಬೆಂಗಳೂರು: ರಾಜ್ಯ ಸರ್ಕಾರದ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಸದನದಲ್ಲಿ ನೀಡಲಾದ ಭರವಸೆಗಳು ಮತ್ತು ವಿವಿಧ ಯೋಜನೆಗಳ ಪ್ರಗತಿಯ ಕುರಿತು ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿಂದು ಭರವಸೆ ಸಮಿತಿಯ ಮಹತ್ವದ ಸಭೆ ನಡೆಯಿತು.

ಭರವಸೆ ಸಮಿತಿಯ ಅಧ್ಯಕ್ಷರಾದ ಕೆ.ಎನ್. ರಾಜಣ್ಣ ಅವರು ಸಭೆಯ ಅಧ್ಯಕ್ಷತೆ ವಹಿಸಿ, ಇಂಧನ ಇಲಾಖೆಯು ಈ ಹಿಂದೆ ನೀಡಿದ್ದ ಭರವಸೆಗಳು, ಆಯವ್ಯಯದಲ್ಲಿ ಘೋಷಿಸಲಾದ ಯೋಜನೆಗಳು ಹಾಗೂ ಪ್ರಸ್ತುತ ಜಾರಿಯಲ್ಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದರು.
ಸಭೆಯ ಪ್ರಮುಖ ನಿರ್ಣಯಗಳು:
ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಕೆ.ಎನ್. ರಾಜಣ್ಣ ಅವರು, ಸರ್ಕಾರ ನೀಡಿದ ಭರವಸೆಗಳನ್ನು ಸಾರ್ವಜನಿಕರಿಗೆ ತಲುಪಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ಯಾವುದೇ ವಿಳಂಬವಿಲ್ಲದೆ, ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಇಂಧನ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆಯವ್ಯಯದಲ್ಲಿ ಘೋಷಿಸಲಾದ ಯೋಜನೆಗಳ ಅನುಷ್ಠಾನದ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಅಧಿಕಾರಿಗಳಿಂದ ಸಮಗ್ರ ವರದಿಯನ್ನು ಪಡೆದು ಪರಿಶೀಲನೆ ನಡೆಸಲಾಯಿತು.
ಭಾಗವಹಿಸಿದ್ದ ಗಣ್ಯರು:
ಸಭೆಯಲ್ಲಿ ಭರವಸೆ ಸಮಿತಿಯ ಸದಸ್ಯರಾದ ಶಾಸಕರುಗಳಾದ ಯು.ಬಿ. ಬಣಕಾರ್, ಪ್ರಭು ಚೌಹಾಣ್, ಉದಯ್ ಗರುಡಾಚಾರ್, ಎಚ್.ಡಿ. ತಮ್ಮಯ್ಯ, ಅಲ್ಲಮಪ್ರಭು ಪಾಟೀಲ್, ಟಿ.ಎಸ್. ಶ್ರೀವತ್ಸ, ಸಿ.ಕೆ. ರಾಮಮೂರ್ತಿ, ವಿಠಲ್ ಸೋಮಣ್ಣ ಹಲಗೇಕರ್, ಎಂ.ಆರ್. ಮಂಜುನಾಥ್ ಮತ್ತು ಕಿರಣ್ ಕುಮಾರ್ ಕೊಡ್ಲಿ ಪಾಲ್ಗೊಂಡಿದ್ದರು.
ಇಂಧನ ಇಲಾಖೆಯ ಪರವಾಗಿ ಹಿರಿಯ ಅಧಿಕಾರಿಗಳಾದ ಗೌರವ್ ಗುಪ್ತ, ಶಿವಶಂಕರ್, ರಾಮ್ ಪ್ರಸಾದ್ ಸೇರಿದಂತೆ ಇಲಾಖೆಯ ಪ್ರಮುಖ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು, ವಿವಿಧ ಯೋಜನೆಗಳ ಪ್ರಗತಿ ವರದಿಯನ್ನು ಸಮಿತಿಯ ಮುಂದಿಟ್ಟರು.
