ಬೆಂಗಳೂರು ಫೆಬ್ರವರಿ - 09 ಕಾಯಕ ಶರಣ ಜಯಂತಿಯ ಅಂಗವಾಗಿ ಇದೇ ಮೊದಲ ಬಾರಿಗೆ “ಕಾಯಕ ಶರಣಶ್ರೀ” ಎಂಬ ಪ್ರಶಸ್ತಿಯನ್ನು ಸ್ಥಾಪನೆ ಮಾಡಲಾಗಿದ್ದು, ಮೊದಲನೇ ಪ್ರಶಸ್ತಿಗೆ ಖ್ಯಾತ ಶಿಕ್ಷಣ ತಜ್ಞ ಪ್ರೊ. ಎಚ್. ಲಿಂಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಪ್ರೊ. ಎಚ್. ಲಿಂಗಪ್ಪ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಜನಪ್ರಿಯರಾದವರು. ಶರಣ ಸಾಹಿತ್ಯ ಕೃಷಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಶಿವರಶರಣರ ಆದರ್ಶಗಳನ್ನೇ ತಮ್ಮ ಬದುಕಿನಲ್ಲೂ ಅಳವಡಿಸಿಕೊಂಡವರು. ಶಿವಶರಣರ ಜೊತೆಗೆ ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆ ಮತ್ತು ಆದರ್ಶಗಳನ್ನು ಯುವಜನರಲ್ಲಿ ಮೂಡಿಸುವ ನಿಟ್ಟಿನಲ್ಲಿ ಲಿಂಗಪ್ಪನವರು ಮಾಡುತ್ತಿರುವ ಕೆಲಸ ಸ್ತುತ್ಯಾರ್ಹ. ಉರಿಲಿಂಗಪೆದ್ದಿ, ಮಹಾನುಭಾವಿ ಮರುಳ ಸಿದ್ಧ, ಬುದ್ಧ ಪ್ರಜ್ಞೆಯ ಕಾಯಕ ಜೀವಿಗಳು, ಬುದ್ಧ- ಬಸವ - ಅಮರ್ತ್ಯಸೇನ್ ಹಾಗೂ ಕಲ್ಯಾಣದ ಕಾಲದ ಶರಣೆಯರು ಮುಂತಾದ ಕೃತಿಗಳನ್ನು ರಚಿಸಿರುವ ಪ್ರೊ. ಎಚ್. ಲಿಂಗಪ್ಪ ತಮ್ಮ ಸಮಾಜಮುಖಿ ಚಿಂತನೆಗಾಗಿ ಹೆಸರಾಗಿದ್ದಾರೆ. ಡಾ. ಎಲ್. ಹನುಮಂತಯ್ಯ ಅವರು ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಪ್ರಶಸ್ತಿ ಸಲಹಾ ಸಮಿತಿಯು ಪ್ರೊ. ಎಚ್. ಲಿಂಗಪ್ಪ ಅವರ ಹೆಸರನ್ನು ಕಾಯಕ ಶರಣಶ್ರೀ ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಈ ಪ್ರಶಸ್ತಿಯು ಐದು ಲಕ್ಷ ನಗದು, ಪ್ರಶಸ್ತಿ ಪ್ರಶಸ್ತಿ ಫಲಕ ಒಳಗೊಂಡಿದೆ.
ನಾಳೆ ದಿನಾಂಕ 10.02.2026ರಂದು ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಕಾಯಕ ಶರಣರ ಜಯಂತಿಯ ಆಚರಣೆ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
