Thursday, March 26, 2026
Homeಟಾಪ್ ನ್ಯೂಸ್ಪೂರ್ಣಾವಧಿಗೂ ನೀವೇ ಮುಖ್ಯಮಂತ್ರಿಯಾಗಿರಿ: ಸಿಎಂಗೆ ರಾಯರಡ್ಡಿ ಪತ್ರ

ಪೂರ್ಣಾವಧಿಗೂ ನೀವೇ ಮುಖ್ಯಮಂತ್ರಿಯಾಗಿರಿ: ಸಿಎಂಗೆ ರಾಯರಡ್ಡಿ ಪತ್ರ

ರಾಜ್ಯ ರಾಜಕಾರಣದಲ್ಲಿ ದೀರ್ಘಾವಧಿಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಅವರು ದಾಖಲೆ ಬರೆಯುತ್ತಿದ್ದು, ಮಾಜಿ ಸಿಎಂ ದಿವಂಗತ ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಅವರಿಗೆ ಶುಭಾಶಯ ಕೋರಿ ಮುಖ್ಯಮಂತ್ರಿಗಳ ಅರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಅವರು ಸಿಎಂಗೆ ಪತ್ರ ಬರೆದಿದ್ದಾರೆ.

ಅಲ್ಲದೇ, ಪೂರ್ಣಾವಧಿಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರಲೆಂದು ಆಶಿಸಿದ್ದಾರೆ.

ರಾಯರಡ್ಡಿ ಪತ್ರದಲ್ಲಿ ಏನಿದೆ?

ಕರ್ನಾಟಕದ ಸಾಮಾಜಿಕ ನ್ಯಾಯ ಹಾಗೂ ಜನಪರ ಸರ್ವಾಂಗೀಣ ಅಭಿವೃದ್ಧಿ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸುತ್ತಿರುವ ನಿಮ್ಮ ದೂರದೃಷ್ಟಿಯ ನಾಯಕತ್ವಕ್ಕೆ ಅಭಿನಂದನೆಗಳು ಸಲ್ಲಿಸುತ್ತಾ..

ಕರ್ನಾಟಕದ ರಾಜಕೀಯ ಇತಿಹಾಸವು ಜನಪರ ಆಡಳಿತ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಾತ್ಮಕ ಸಮಾನತೆಯ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ನಾಯಕರ ದಿಟ್ಟ ಹೋರಾಟಗಳಿಂದ ರೂಪುಗೊಂಡ ಸುವರ್ಣ ಪರಂಪರೆಯನ್ನು ಹೊಂದಿದೆ. ಶೋಷಿತರು, ಹಿಂದುಳಿದವರು ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಪರವಾಗಿ ಧೈರ್ಯವಾಗಿ ನಿಂತ ನಾಯಕರಿಂದಲೇ ಈ ನಾಡಿನ ಪ್ರಗತಿಪರ ರಾಜಕೀಯ ಸಂಸ್ಕೃತಿ ಬೆಳೆದಿದೆ.

ಆ ಪರಂಪರೆಯಲ್ಲಿ ಅಚ್ಚಳಿಯದ ಗುರುತು ಮೂಡಿಸಿದ ಮಹಾನ್ ನಾಯಕರಲ್ಲಿ ದಿವಂಗತ ದೇವರಾಜ ಅರಸು ಅವರು ಅಗ್ರಗಣ್ಯರು. ಅವರು 20-3-1972 ರಿಂದ 31-12-1977 ರವರೆಗೆ ಹಾಗೂ 28-2-1978 ರಿಂದ 7-1-1980 ರವರೆಗೆ ಒಟ್ಟಾರೆ 2,792 ದಿನಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ, ಭೂ ಸುಧಾರಣೆ, ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಉನ್ನತಿ ಮತ್ತು ಶೋಷಿತರ ಸಬಲೀಕರಣದ ಮೂಲಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅಮರ ಅಧ್ಯಾಯವೊಂದನ್ನು ರಚಿಸಿದರು.

ಅದಲ್ಲದೆ ಕರ್ನಾಟಕ ರಾಜ್ಯವನ್ನು ಪ್ರಗತಿಪರ ಚಿಂತನೆಯತ್ತ ತರುವುದರಲ್ಲಿ ಹಿಂದಿನ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ಶ್ರೀಯುತ ರಾಮಕೃಷ್ಣ ಹೆಗಡೆ ಇವರುಗಳ ವಿಶಾಲ ದೃಷ್ಟಿಕೋನದ ವಿಚಾರಗಳು ಹಾಗೂ ಪ್ರಾಮಾಣಿಕ ಚಿಂತನೆಗಳು ನಮ್ಮ ಮುಂದೆ ಇಂದಿಗೂ ಜೀವಂತ ಇರುತ್ತವೆ

ಅದೇ ಸಾಮಾಜಿಕ ನ್ಯಾಯ ತಾತ್ವಿಕ ಮತ್ತು ರಾಜಕೀಯ ಪರಂಪರ ಮತ್ತು ಸರ್ವಾಂಗೀಣ ಅಭಿವೃದ್ಧಿ ಚಿಂತನೆಗಳನ್ನು ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಮುಂದುವರೆಸಿಕೊಂಡು, ಕರ್ನಾಟಕದ ಇತಿಹಾಸಕ್ಕೆ ಹೊಸ ಮೈಲಿಗಲ್ಲು ಸ್ಥಾಪಿಸಿ ನೀವು 13-05-2013 ರಿಂದ 15-05-2018 ರವರೆಗೆ ಹಾಗೂ 20-05-2023 ರಿಂದ 06-01-2026 ರವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು, ಸುದೀರ್ಘ ಮತ್ತು ಸಾರ್ಥಕ ಆಡಳಿತದ ಮೂಲಕ ಚಾರಿತ್ರಿಕ ದಾಖಲೆ ನಿರ್ಮಿಸುತ್ತಿರುವುದು ರಾಜ್ಯದ ಜನತೆಗೆ ಅಪಾರ ಹೆಮ್ಮೆಯ ವಿಷಯವಾಗಿದೆ. ಹಾಗೂ ಮುಂದಿನ ಎರಡುವರೆ ವರ್ಷಗಳ ಕಾಲ ಅಂದರೆ 28 ಮೇ 2028 ರವರೆಗೆ ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರಿ ಎಂದು ನನ್ನ ನಂಬಿಕೆಯಾಗಿದೆ

ನಿಮ್ಮ ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತವು ಸ್ಪಷ್ಟವಾಗಿ ಜನಪರ, ಸಂವಿಧಾನಬದ್ಧ ಮತ್ತು ಸಾಮಾಜಿಕ ನ್ಯಾಯ ಕೇಂದ್ರಿತವಾಗಿದೆ. ರಾಜ್ಯದ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದ ಜನಾಂಗಕ್ಕೆ ಯಾವುದೇ ಧರ್ಮ ಜಾತಿ ಭೇದವಿಲ್ಲದೆ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್, ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಹಾಗೂ ರೈತ ಸಮುದಾಯಕ್ಕೆ ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ಬಡವರು, ಮಹಿಳೆಯರು, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಗೌರವವನ್ನು ಒದಗಿಸುವಲ್ಲಿ ನಿಮ್ಮ ನಿಮ್ಮ ಪ್ರಾಮಾಣಿಕ ವಿಚಾರಗಳು ಮಹತ್ವದ ಪಾತ್ರ ವಹಿಸಿದೆ. ಈ ಯೋಜನೆಗಳು ಕರ್ನಾಟಕವನ್ನು ನಿಜಾರ್ಥದಲ್ಲಿ ಕಲ್ಯಾಣರಾಜ್ಯದ ಮಾದರಿಯಾಗಿ ರೂಪಿಸುವ ದಿಟ್ಟ ರಾಜಕೀಯ ಸಂಕಲ್ಪದ ಪ್ರತಿಬಿಂಬಗಳಾಗಿವೆ.

ನಿಮ್ಮ ಆಡಳಿತದಲ್ಲಿ ಪಾರದರ್ಶಕತೆ, ಹಣಕಾಸು ಶಿಸ್ತು, ಸಂವಿಧಾನದ ಮೌಲ್ಯಗಳಿಗೆ ಅಚಲ ನಿಷ್ಠೆ ಹಾಗೂ ಜಾತಿ-ಧರ್ಮ-ಭಾಷೆಗಳ ಅತೀತವಾಗಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಸಮನ್ವಯದ ರಾಜಕಾರಣವು ನಿಮ್ಮ ನಾಯಕತ್ವದ ವಿಶಿಷ್ಟ ಗುರುತುಗಳಾಗಿವೆ. ನಿಮ್ಮ ಸಮಾಜಮುಖಿ ಮತ್ತು ಪ್ರಗತಿಪರ ದೃಷ್ಟಿಕೋನಕ್ಕೆ ಸಮಕಾಲೀನ ರಾಜಕೀಯ ರೂಪ ನೀಡಿದ ನಾಯಕರೆಂದು ನಿಮ್ಮನ್ನು ಗೌರವದಿಂದ ಮುಂದಿನ ಇತಿಹಾಸ ಪುಟಗಳಲ್ಲಿ ಸ್ಮರಿಸುವುದು ನಿಶ್ಚಿತ.

ಈ ಹಿನ್ನೆಲೆಯಲ್ಲಿ, ಕರ್ನಾಟಕದ ಕೋಟ್ಯಂತರ ಜನತೆಯ ಪರವಾಗಿ, ನಿಮ್ಮ ದೂರದೃಷ್ಟಿಯ ನಾಯಕತ್ವಕ್ಕೆ, ಜನಪರ ನೀತಿಗಳಿಗೆ ಹಾಗೂ ರಾಜ್ಯವನ್ನು ಸಮಾನತೆ, ಸೌಹಾರ್ದ ಮತ್ತು ಸಾಮಾಜಿಕ ನ್ಯಾಯದ ದಾರಿಯಲ್ಲಿ ದಿಟ್ಟವಾಗಿ ಮುನ್ನಡೆಸುತ್ತಿರುವ ನಿಮ್ಮ ಅವಿರತ ಸೇವೆಗೆ ಗೌರವಪೂರ್ವಕ ಹಾಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಪತ್ರದಲ್ಲಿ ರಾಯರಡ್ಡಿ ಅವರು ಉಲ್ಲೇಖಿಸಿದ್ದಾರೆ.

ಹೆಚ್ಚಿನ ಸುದ್ದಿ