ಧಾರವಾಡ: ಪತ್ನಿ ದಪ್ಪಗಿದ್ದಾಳೆಂಬ ಕಾರಣಕ್ಕೆ ಪತಿಯೊಬ್ಬ ಆಕೆಯನ್ನು ಉಸಿರುಗಟ್ಟಿಸಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಜಿಲ್ಲೆಯ ನವಲಗುಂದ ತಾಲ್ಲೂಕಿನ ಹಣಸಿ ಗ್ರಾಮದಲ್ಲಿ ನಡೆದಿದೆ.
ಹಣಸಿ ಗ್ರಾಮದ ಪ್ರಿಯಾಂಕಾ ಕಮಲಾಕರ್ (29) ಕೊಲೆಯಾದ ದುರ್ದೈವಿ. ಕೊಲೆ ಕೃತ್ಯ ಎಸಗಿದ ಆರೋಪಿ ಪತಿ ಬಸವರಾಜ್ ವಡ್ಡರ್ ಹಾಗೂ ಆತನಿಗೆ ಸಾಥ್ ನೀಡಿದ ರೇಣವ್ವ, ಸುಭಾಷ್ ಮತ್ತು ಸಿದ್ದರಾಮೇಶ್ ಎಂಬುವವರನ್ನು ನವಲಗುಂದ ಪೊಲೀಸರು ಬಂಧಿಸಿದ್ದಾರೆ.
ಕೊಲೆಗೆ ಕಾರಣವಾದ ದೈಹಿಕ ತೂಕ!
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ಪ್ರಿಯಾಂಕಾ ಹಾಗೂ ಬಸವರಾಜ್ಗೆ 2024 ರಲ್ಲಿ ವಿವಾಹವಾಗಿತ್ತು. ಆರಂಭದ ಕೆಲವು ತಿಂಗಳು ದಾಂಪತ್ಯ ಜೀವನ ಸುಗಮವಾಗಿಯೇ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಿಯಾಂಕಾ ದಪ್ಪಗಿದ್ದಾಳೆ ಎಂಬ ಕಾರಣಕ್ಕೆ ಪತಿ ಬಸವರಾಜ್ ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲು ಆರಂಭಿಸಿದ್ದ ಎನ್ನಲಾಗಿದೆ.
ಇದರೊಂದಿಗೆ, ಕುಟುಂಬ ಯೋಜನೆ ಹಾಗೂ ಮಗು ಹೆರುವ ವಿಚಾರವಾಗಿಯೂ ಇಬ್ಬರ ನಡುವೆ ದೀರ್ಘಕಾಲದಿಂದ ತೀವ್ರ ಭಿನ್ನಾಭಿಪ್ರಾಯಗಳು ಮೂಡಿದ್ದವು. ಇದೇ ವಿಚಾರವಾಗಿ ಸೋಮವಾರ ರಾತ್ರಿಯೂ ದಂಪತಿ ನಡುವೆ ಗಲಾಟೆ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ಬಸವರಾಜ್, ಮನೆಯಲ್ಲೇ ಪ್ರಿಯಾಂಕಾಳ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸ್ ಕಸ್ಟಡಿಯಲ್ಲಿ ನಾಲ್ವರು ಆರೋಪಿಗಳು:
ಘಟನೆಗೆ ಸಂಬಂಧಿಸಿದಂತೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಮುಖ್ಯ ಆರೋಪಿ ಬಸವರಾಜ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಕೊಲೆಗೆ ಪ್ರಚೋದನೆ ಹಾಗೂ ಸಾಥ್ ನೀಡಿದ ಆರೋಪದ ಮೇಲೆ ಉಳಿದ ಮೂವರು ಆರೋಪಿಗಳಾದ ರೇಣವ್ವ, ಸುಭಾಷ್ ಮತ್ತು ಸಿದ್ದರಾಮೇಶ್ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಕೇವಲ ದೈಹಿಕ ರೂಪ ಹಾಗೂ ತೂಕದ ಕಾರಣಕ್ಕೆ ವಿವಾಹಿತ ಮಹಿಳೆಯೊಬ್ಬಳನ್ನು ಪತಿಯೇ ಹತ್ಯೆ ಮಾಡಿರುವುದು ಸ್ಥಳೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
